ಹಾಸನ: ತಾಯಿಯೊಬ್ಬರು ಜನ್ಮ ನೀಡಿದ ಮರು ದಿನವೇ ಗಂಡು ಮಗುವನ್ನು ಮಾರಾಟ ಮಾಡಿದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮದಲ್ಲಿ ನಡೆದಿದೆ.
ಘಟನೆ ಸಂಬಂಧ ಮಗುವಿನ ತಾಯಿ ಗಿರಿಜಾ, ಆಶಾ ಕಾರ್ಯಕರ್ತೆ ಸುಮಿತ್ರಾ, ಮಗುವನ್ನು ಖರೀದಿಸಿದ ಮಹಿಳೆ ಉಷಾ, ಮಗು ಕೊಡಲು ಪ್ರೇರಣೆ ನೀಡಿದ ಆರೋಪದಲ್ಲಿ ಶ್ರೀಕಾಂತ್ ಹಾಗು ಸುಬ್ರಹ್ಮಣ್ಯ ಎಂಬವರನ್ನು ಬಂಧಿಸಲಾಗಿದೆ.
ಸಕಲೇಶಪುರ ತಾಲ್ಲೂಕಿನ ಹೆತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮನೀಡಿದ್ದ ಮಹಿಳೆ ಗಿರಿಜಾ ಅವರ ಮಗುವನ್ನು ಚಿಕ್ಕಮಗಳೂರಿನ ಉಷಾ ಎಂಬ ಮಹಿಳೆಗೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ಮಗುವನ್ನು ಅನಧಿಕೃತವಾಗಿ ಹಸ್ತಾಂತರ ಮಾಡಿರುವ ಬಗ್ಗೆ ಮಕ್ಕಳ ರಕ್ಷಣ ಘಟಕಕ್ಕೆ ದೂರು ಬಂದಿತ್ತು.
ತಮಗೆ ಈಗಾಗಲೆ ಇಬ್ಬರು ಗಂಡು ಮಕ್ಕಳಿರುವ ಕಾರಣ ಮಗುವನ್ನು ಬೇರೆಯವರಿಗೆ ನೀಡಿದ್ದಾಗಿ ಮಗುವಿನ ತಾಯಿ ತಿಳಿಸಿದ್ದಾರೆ.
ಜನವರಿ 2ರಂದು ಬಂಧ ಅಧಿಕೃತ ಮಾಹಿತಿ ಆಧರಿಸಿ ಮಕ್ಕಳ ರಕ್ಷಣಾ ಅಧಿಕಾರಿ ಕಾಂತರಾಜ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ಮಗುವಿಗೆ ಹಾಸನ ಮಕ್ಕಳ ರಕ್ಷಣಾ ಘಟಕದಲ್ಲಿ ಆಶ್ರಯ ನೀಡಲಾಗಿದೆ. ಇನ್ನು ಮಗುವನ್ನು ಏನು ಮಾಡಲಾಗುತ್ತದೆ ಎಂಬ ಬಗ್ಗೆ ತೀರ್ಮಾನ ಆಗಬೇಕಾಗಿದೆ.