ಮಹಾರಾಷ್ಟ್ರ: ಮಗ ದಾರಿ ತಪ್ಪುತ್ತಿದ್ದಾನೆ, ಹುಡುಗಿಯರನ್ನು ಚುಡಾಯಿಸುತ್ತಿದ್ದ ಎನ್ನುವ ಕಾರಣಕ್ಕೆ ಕೋಪಗೊಂಡ ತಂದೆ ಪಾನೀಯಕ್ಕೆ ವಿಷ ಹಾಕಿ 14 ವರ್ಷದ ಮಗನನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ವಿಜಯ್ ಬಟ್ಟು ಎಂಬಾತನನ್ನು ಬಂಧಿಸಲಾಗಿದೆ. ಮೃತನನ್ನು ವಿಶಾಲ್ ಎಂದು ಗುರುತಿಸಲಾಗಿದೆ.
ಜನವರಿ 13ರಂದು ಬಾಲಕನೊಬ್ಬ ಕಾಣೆಯಾಗಿದ್ದ ಎನ್ನುವ ದೂರನ್ನು ಪೊಲೀಸರು ಸ್ವೀಕರಿಸಿದ್ದರು. ಇದಾದ ಬಳಿಕ ಬಾಲಕನ ಶವವೂ ಪತ್ತೆಯಾಗಿತ್ತು. ಕುಟುಂಬದವರು ಶವವನ್ನು ತಮ್ಮ ಕಾಣೆಯಾದ ಮಗ ವಿಶಾಲ್ ಎಂದು ಗುರುತಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಆತ ವಿಷ ಸೇವಿಸಿದ್ದಾನೆ ಎಂದು ತಿಳಿದು ಬಂದಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತಂದೆಯ ಹಾವ ಭಾವದಲ್ಲಿ ವ್ಯತ್ಯಾಸವನ್ನು ಗುರುತಿಸಿದ ಪೊಲೀಸರು ಅವರನ್ನು ವಿಚಾರಿಸಿದ್ದಾರೆ. ಆಗ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಮಗ ಓದುತ್ತಿರಲಿಲ್ಲ, ಶಾಲೆಯಲ್ಲಿ ಹೆಣ್ಣುಮಕ್ಕಳನ್ನು ಚುಡಾಯಿಸುತ್ತಿದ್ದ, ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದ, ಹಲವು ಬಾರಿ ಮಗನಿಗೆ ಬುದ್ಧಿವಾದ ಹೇಳಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದಾಗಿ ತಂದೆ ಒಪ್ಪಿಕೊಂಡಿದ್ದಾರೆ.