ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹುಲಿ ದಾಳಿಯಿಂದ ಸಾವಿಗೀಡಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಕೆಲವು ದಿನಗಳ ಹಿಂದೆಯಷ್ಟೇ ಘಟನೆ ನಡೆದಿತ್ತು. ಆ ನೆನಪು ಮರೆಯುವ ಮುನ್ನವೇ ಮತ್ತೊಂದು ಹುಲಿ ದಾಳಿ ನಡೆದಿದ್ದು ದನಗಾಹಿಯೊಬ್ಬರು ಬಲಿಯಾಗಿದ್ದಾರೆ.
ಈ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಕಾಡಂಚಿನ ಅಯ್ಯನಕೆರೆ ಗ್ರಾಮದಲ್ಲಿ ನಡೆದಿದೆ. ಉಡುವೆಪುರದ ನಿವಾಸಿ ಗಣೇಶ್(58) ಹುಲಿ ದಾಳಿಗೆ ಬಲಿಯಾದವರು. ಇವರು ಎಂದಿನಂತೆ ದನಗಳನ್ನು ಮೇಯಿಸಲು ಅಯ್ಯನಕೆರೆ ಗ್ರಾಮದ ಪಕ್ಕಕ್ಕೆ ತೆರಳಿದ್ದರು. ಅಲ್ಲಿ ದನಗಳನ್ನು ಮೇಯಿಸುತ್ತಿದ್ದ ವೇಳೆ ಪೊದೆಯಲ್ಲಿದ್ದ ಹುಲಿ ಏಕಾಏಕಿ ದಾಳಿ ಮಾಡಿ ಅವರನ್ನು ಕಾಡಿನೊಳಗಡೆ ಎಳೆದೊಯ್ದು ಕೊಂದು ಹಾಕಿದೆ. ಈ ವಿಚಾರ ಯಾರಿಗೂ ತಿಳಿದಿರಲಿಲ್ಲ.
ಸಂಜೆ ವೇಳೆಗೆ ಮೇಯಲು ಹೋಗಿದ್ದ ದನಗಳು ಹಿಂತಿರುಗಿದರೂ ಗಣೇಶ್ ಮಾತ್ರ ಬಂದಿರಲಿಲ್ಲ. ಇದರಿಂದ ಆತಂಕಗೊಂಡು ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಕಾಡಿನೊಳಗೆ ಗಣೇಶ್ ಅವರ ರಕ್ತ ಸಿಕ್ತ ಮೃತದೇಹ ದೊರೆತಿದೆ.
ಹುಲಿ ಆಗಾಗ್ಗೆ ದಾಳಿ ಮಾಡಿ ಜನ ಮತ್ತು ಜಾನುವಾರುಗಳನ್ನು ಕೊಂದು ಹಾಕುತ್ತಿರುವುದರಿಂದ ಕಾಡಂಚಿನ ಜನರು ಭಯಭೀತರಾಗಿದ್ದು ಹುಲಿಯನ್ನು ಸೆರೆಹಿಡಿದು ನೆಮ್ಮದಿಯ ಬದುಕು ಸಾಗಿಸಲು ಅನುವು ಮಾಡಿಕೊಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.