ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಗೋಕೆರೆ ಗ್ರಾಮದ ನಿವಾಸಿಗಳಾದ ವೆಂಕಟೇಶ್ ಮತ್ತು ಜಗದೀಶ್ ಇವರಿಬ್ಬರೂ ಒಂದೇ ತಾಯಿಯ ಮಕ್ಕಳು. ಮೊದಲಿನಿಂದಲೂ ಜೊತೆಯಲ್ಲೆ ಬೆಳೆದಿದ್ದ ಇವರಿಬ್ಬರು ಕಷ್ಟಪಟ್ಟು ದುಡಿದು ಒಟ್ಟಾಗಿ ಒಂದು ಕಾರನ್ನು ಖರೀದಿ ಮಾಡಿದ್ದರು.
ಇಬ್ಬರಿಗೂ ಮದುವೆಯಾಗುತ್ತಿದ್ದಂತೆ ಅಣ್ಣ ತಮ್ಮಂದಿರ ಮಧ್ಯೆಯೂ ಕಲಹ ಶುರುವಾಗಿ ಬೇರೆ ಬೇರೆಯಾಗಿದ್ದು, ಪ್ರತ್ಯೇಕವಾಗಿ ಸಂಸಾರ ನಡೆಸಿಕೊಂಡು ಹೋಗುತಿದ್ದರು. ಈ ನಡುವೆ ಸಹೋದರ ಜಗದೀಶ್ ತನ್ನ ಪತ್ನಿ ಕಡೆಯವರಿಗೆ ಕಾರು ನೀಡಿದ್ದ ಕಾರಣ ಅಣ್ಣ ವೆಂಕಟೇಶ್ ಕಾರನ್ನ ಕಿತ್ತುಕೊಂಡು ಬಂದು ಮನೆ ಬಳಿ ನಿಲ್ಲಿಸಿದ್ದ. ಹೀಗಾಗಿ ಕಾರಿನ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ಕಲಹ ಶುರುವಾಗಿತ್ತು.
ಕಾರು ನಮಗೆ ಸೇರಿದ್ದು ಬೇರೆಯವರಿಗೆ ಯಾಕೆ ಕೊಟ್ಟೆ ಅಂತ ಶುರುವಾದ ಜಗಳದ ವೇಳೆ ಅಣ್ಣ ತಮ್ಮಂದಿರ ನಡುವೆ ಮಾತಿನ ಚಕಮಕಿ ನಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದಾರೆ. ಇನ್ನು ಈ ವೇಳೆ ಕೈನಲ್ಲಿದ್ದ ಪೆಟ್ರೋಲ್ ಅನ್ನು ವೆಂಕಟೇಶ್ ತಮ್ಮ ಜಗದೀಶ್ ಮೆಲೆ ಹಾಕಿ ಬೆಂಕಿ ಹಚ್ಚಿದ್ದಾನೆ.
ಬೆಂಕಿಯಲ್ಲಿ ಜಗದೀಶ್ ಸುಡುತ್ತಿದ್ದರೂ ಸಹಾಯಕ್ಕೆ ಬಾರದ ಅಣ್ಣ ಹಾಗೂ ತಾಯಿ ಜಗದೀಶ್ ಪತ್ನಿಯನ್ನು ತಡೆಯಲು ಬಿಡದೆ ಹಿಡಿದುಕೊಂಡಿದ್ರು ಅಂತ ಮೃತನ ಕಡೆಯವರು ಆರೋಪಿಸಿದ್ದಾರೆ. ಅಲ್ಲದೆ ಮೃತ ಜಗದೀಶ್ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಗೆ ಆಸ್ತಿ ಹಾಗೂ ಮನೆಯಲ್ಲಿ ಪಾಲು ಕೊಡಿಸಿ ಅಂತ ಮೃತ ದೇಹದ ಅಂತ್ಯಸಂಸ್ಕಾರ ಮಾಡದೆ ಕುಟುಂಬಸ್ಥರು ಧರಣಿ ನಡೆಸಿದ್ರು.
ಇನ್ನು ಈ ವೇಳೆ ಮಧ್ಯ ಪ್ರವೇಶಿಸಿದ ದೇವನಹಳ್ಳಿ ಪೊಲೀಸರು ಮೃತನ ಪತ್ನಿಗೆ ನ್ಯಾಯ ಕೊಡಿಸುವ ಭರವಸೆ ನೀಡಿ ಮೃತದೇಹದ ಅಂತ್ಯಸಂಸ್ಕಾರವನ್ನ ಮಾಡಿಸಿದ್ದಾರೆ.