ಕೋಲಾರ: ಅಪ್ರಾಪ್ತ ಬಾಲಕ ಕಾರ್ತಿಕ್ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಮುಳಬಾಗಿಲು ತಾಲೂಕಿನ ದೇವರಾಯ ಸಮುದ್ರ ಗ್ರಾಮದ ಬಳಿ ನಡೆದಿದೆ.
ಆರೋಪಿಗಳನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಮುಳಬಾಗಿಲು ಸಬ್ಇನ್ಪೆಕ್ಟರ್ ವಿಠಲ್ ತಳವಾರ್ ಆರೋಪಿಗಳ ಎರಡೂ ಕಾಲುಗಳಿಗೆ ಫೈರಿಂಗ್ ಮಾಡಿದ್ದಾರೆ. ಹಲ್ಲೆ ನಡೆಸಿದ್ದರಿಂದ ಪಿಎಸ್ಐ, ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು, ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಕೋಲಾರ ನಗರದ ಪಿಸಿ ಬಡಾವಣೆಯಲ್ಲಿ ನಡೆದ 17 ವರ್ಷದ ಬಾಲಕ ಕಾರ್ತಿಕ್ ಸಿಂಗ್ ಎಂಬಾತನ ಹತ್ಯೆ ನಡೆದಿತ್ತು. ಅಪ್ರಾಪ್ತ ಬಾಲಕರೇ ಸೇರಿ ಇನ್ನೊಬ್ಬ ಅಪ್ರಾಪ್ತ ಬಾಲಕನನ್ನು ದಾರುಣವಾಗಿ ಕೊಂದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಕೊಂದು ಹಾಕಿರುವ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದರು.