ರಾಮನಗರ: ಶಿಥಿಲವಾಗಿದ್ದ ನೀರಿನ ತೊಟ್ಟಿಯ ಗೋಡೆ ಏಕಾಏಕಿ ಉರುಳಿಬಿದ್ದ ಪರಿಣಾಮ ಓರ್ವ ಬಾಲಕ ಮೃತಪಟ್ಟು ಮತ್ತೊಬ್ಬನಿಗೆ ಗಂಭೀರ ಗಾಯಗೊಂಡಿರುವ ಘಟನೆ ಗುರುವಾರ ಬೆಳಿಗ್ಗೆ ಹೆಚ್.ಗೊಲ್ಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ತಾಲ್ಲೂಕಿನ ಬಿಡದಿ ಹೋಬಳಿ ಹೆಚ್.ಗೊಲ್ಲಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಕೌಶಿಕ್ಗೌಡ.ಕೆ(12) ಘಟನೆಯಲ್ಲಿ ಮೃತಪಟ್ಟ ಬಾಲಕ. ತೀವ್ರವಾಗಿ ಗಾಯಗೊಂಡ ಮತ್ತೋರ್ವ 7ನೇ ತರಗತಿ ವಿದ್ಯಾರ್ಥಿ ಚರಣ್ ಎಂಬಾತನನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಸತಿ ಶಾಲೆಯ ಆವರಣದಲ್ಲಿ ನಿರ್ಮಿಸಿದ್ದ ಬೃಹತ್ ನೀರಿನ ತೊಟ್ಟಿಯ ಬಳಿ ಎಂದಿನಂತೆ ಇಬ್ಬರು ಬಾಲಕರು ಮುಂಜಾನೆ ಮುಖ ತೊಳೆಯುತ್ತಿದ್ದಾಗ ಬೆಳಿಗ್ಗೆ 7.45ರ ಸಮಯದಲ್ಲಿ ದುರ್ಘಟನೆ ಸಂಭವಿಸಿದೆ. ಸಿಮೆಂಟ್ನಿಂದ ನಿರ್ಮಿಸಿದ್ದ ನೀರಿನ ತೊಟ್ಟಿಯ ಎರಡು ಕಡೆಯ ಗೋಡೆ ಏಕಾಏಕಿ ಉರುಳಿಬಿದ್ದಿದೆ. ಗೋಡೆಬಿದ್ದ ರಭಸಕ್ಕೆ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಕೌಶಿಕ್ಗೌಡ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಮತ್ತೋರ್ವ ಚರಣ್ ಕಾಲಿಗೆ ಬಲವಾದ ಪೆಟ್ಟಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದಕ್ಕೂ ಮುನ್ನ 30ಕ್ಕೂ ಹೆಚ್ಚು ಬಾಲಕರು ಇದೇ ತೊಟ್ಟಿಯ ಬಳಿ ಮುಖ ತೊಳೆದು ಕೊಠಡಿಗಳಿಗೆ ತೆರಳಿದ್ದರೆಂದು ಹೇಳಲಾಗಿದೆ. ಸುಮಾರು 15 ವರ್ಷಗಳ ಹಿಂದೆ ನಿರ್ಮಿಸಿದ್ದ ನೀರಿನ ತೊಟ್ಟಿ ಶಿಥಿಲವಾಗಿತ್ತು ಎಂದು ಹೇಳಲಾಗಿದೆ. ಅಧಿಕ ಪ್ರಮಾಣದಲ್ಲಿ ತುಂಬಿಸಿದ್ದ ನೀರಿನ ಒತ್ತಡದಿಂದ ಗೋಡೆ ಒಮ್ಮೆಲೆ ಉರುಳಿದ್ದು ಬಾಲಕನನ್ನು ಬಲಿ ತೆಗೆದುಕೊಂಡಿದೆ. ಮೃತ ವಿದ್ಯಾರ್ಥಿಯ ಶವವನ್ನು ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಬಳಪಡಿಸಿ ಪೋಷಕರಿಗೆ ನೀಡಲಾಗಿದೆ.
ಬಾಲಕ ಮೃತಪಟ್ಟ ಸುದ್ದಿ ತಿಳಿದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿ ಹಾಸ್ಟಲ್ ಸುತ್ತಲೂ ಅಧಿಕ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಸೂಕ್ತ ಬಂದೂಬಸ್ತ್ ಏರ್ಪಡಿಸಲಾಗಿತ್ತು. ಡಿವೈಎಸ್ಪಿ ದಿನಕರ್ಶೆಟ್ಟಿ ಹಾಗೂ ಬಿಡದಿ ಠಾಣೆ ನಿರೀಕ್ಷಕ ಶಂಕರ್ನಾಯಕ್ ಅವರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಘಟನಾ ಸ್ಥಳಕ್ಕೆ ರಾಮನಗರ ತಹಸೀಲ್ದಾರ್ ತೇಜಸ್ವಿನಿ, ತಾಪಂ ಇಒ ಪ್ರದೀಪ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಸಂಬಂಧ ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.