ಚೆನ್ನೈ: ರಾಜ್ಯದಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿವಾದ ಜೋರಾಗಿದೆ. ಈ ನಡುವೆ ಸೆಪ್ಟೆಂಬರ್ 28ರಂದು ಬೆಂಗಳೂರಿಗೆ ಆಗಮಿಸಿದ್ದ ತಮಿಳು ನಟ ಸಿದ್ಧಾರ್ಥ್ ತಮ್ಮ ‘ಚಿತ್ತ’ ಸಿನಿಮಾದ ಕನ್ನಡ ಆವೃತ್ತಿ ‘ಚಿಕ್ಕು’ ಸಿನಿಮಾದ ಸುದ್ದಿಗೋಷ್ಠಿಯನ್ನು ಮಲ್ಲೇಶ್ವರಂನ ಹೋಟೆಲೊಂದರಲ್ಲಿ ನಡೆಸಿದ್ದರು. ಈ ವೇಳೆ ಒಳ ನುಗ್ಗಿದ ಕರವೇ ಹೋರಾಟಗಾರರು ಸಿದ್ಧಾರ್ಥ್ ಅವರ ಮಾತನ್ನು ತಡೆದರಲ್ಲದೆ, ಕೂಡಲೇ ಕಾರ್ಯಕ್ರಮವನ್ನು ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದ್ದರು.
ಈ ವೇಳೆ ಸಿದ್ಧಾರ್ಥ್ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಆದರೂ ಕೂಡ ಕಾರ್ಯಕರ್ತರು, ಕಾರ್ಯಕ್ರಮ ನಿಲ್ಲಿಸುವಂತೆ ಒತ್ತಾಯ ಮಾಡಿದ ಕೂಡಲೇ ನಟ ಸಿದ್ಧಾರ್ಥ್ ವೇದಿಕೆ ಬಿಟ್ಟು ತೆರಳಿದ್ದರು. ಬಳಿಕ ನಟ ಶಿವರಾಜ್ ಕುಮಾರ್, ಪ್ರಕಾಶ್ ರೈ ಅವರು ಸಿದ್ಧಾರ್ಥ್ ಅವರ ಬಳಿ ಕ್ಷಮೆ ಕೇಳಿದ್ದರು. ಇದೀಗ, ತಮಿಳುನಾಡಿನ ಎನ್ಟಿಕೆ (ನಾಮ್ ತಮಿಳರ್ ಕಚ್ಚಿ) ಸಂಘಟನೆಯ ಅಧ್ಯಕ್ಷ ಸಿಮನ್ ಆಕ್ರೋಶದಿಂದ ಪ್ರತಿಕ್ರಿಯೆ ನೀಡಿದ್ದಾರೆ. ನಟ ಸಿದ್ಧಾರ್ಥ್ ಒಬ್ಬ ಕಲಾವಿದ ಅವರಿಗೂ ನೀರಿನ ಸಮಸ್ಯೆಗೆ ಯಾವುದೇ ಸಂಬಂಧವಿಲ್ಲ. ಅವರು ಕಾವೇರಿ ನೀರು ಕೇಳಲಿಲ್ಲ. ಕಾವೇರಿ ವಿಚಾರದಲ್ಲಿ ಕರ್ನಾಟಕದಲ್ಲಿ ಎಲ್ಲರೂ ತಮಿಳುನಾಡಿನ ವಿರುದ್ಧ ಇದ್ದಾರೆ. ಈ ಬಗ್ಗೆ ರಾಜಕೀಯ ಮುಖಂಡರು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ವಿಷಯಕ್ಕೆ ಸಂಬಂಧಿಸಿದಂತೆ ಕಲಾವಿದನನ್ನು ನಿರ್ಬಂಧಿಸುವುದು ಸರಿಯಲ್ಲ” ಎಂದಿದ್ದಾರೆ ಎನ್ಟಿಕೆ ಅಧ್ಯಕ್ಷ ಸಿಮನ್.
’’ಕನ್ನಡ ನಟ ಯಶ್ ನಟನೆಯ ‘ಕೆಜಿಎಫ್’ ಎರಡು ಪಾರ್ಟ್ನಲ್ಲಿ ತಮಿಳುನಾಡಿನಲ್ಲಿ ಬಿಡುಗಡೆ ಆಗಿತ್ತು. ಅದಕ್ಕೆ ನಾವು ಅಡ್ಡಿಪಡಿಸಲಿಲ್ಲ, ಬದಲಿಗೆ ನಾವು ಅದನ್ನು ಸ್ವಾಗತಿಸಿದೆವು. ನಾನು ಒಂದೇ-ಒಂದು ಹೇಳಿಕೆ ಕೊಟ್ಟರೆ ಕನ್ನಡದ ಒಂದೇ ಒಂದು ಸಿನಿಮಾ ಸಹ ತಮಿಳುನಾಡಿನಲ್ಲಿ ಬಿಡುಗಡೆ ಆಗುವುದಿಲ್ಲ. ಕಾವೇರಿ ವಿವಾದವು ರಾಜಕಾರಣಿಗಳು ಕೂತು ಚರ್ಚಿಸಿ ಇತ್ಯರ್ಥ ಮಾಡಿಕೊಳ್ಳಬೇಕಾದ ವಿಷಯ. ಆದರೆ ಈ ವಿಷಯ ಇಟ್ಟುಕೊಂಡು ಒಬ್ಬ ಕಲಾವಿದನ ಮೇಲೆ ಹೀಗೆ ವರ್ತಿಸಿರುವುದು ಖಂಡನೀಯ. ಸಿದ್ಧಾರ್ಥ್ ಸುದ್ದಿಗೋಷ್ಠಿ ನಡೆಸುತ್ತಿದ್ದ ಹಾಲ್ನಲ್ಲಿ ಗಾರ್ಡ್ಸ್ಗಳು ಇದ್ದರೂ ಸಹ ಅವರು ಆ ಹೋರಾಟಗಾರರನ್ನು ತಡೆಯಲಿಲ್ಲ. ಇದೇ ಘಟನೆ ತಮಿಳುನಾಡಿನಲ್ಲಿ ನಡೆದಿದ್ದರೆ ಈ ವೇಳೆಗಾಗಲೇ ಅವರೆಲ್ಲ ಬಂಧನಕ್ಕೆ ಒಳಗಾಗಿರುತ್ತಿದ್ದರು” ಎಂದು ಸಿಮನ್ ಹೇಳಿದ್ದಾರೆ.