ಆಂಧ್ರ ಪ್ರದೇಶ ಸರ್ಕಾರವು ಚಿತ್ರಮಂದಿರಗಳ ಟಿಕೆಟ್ ಬೆಲೆಯನ್ನು ಏರಿಸಬೇಕೆಂದು ಚಿರಂಜೀವಿ ನೇತೃತ್ವದಲ್ಲಿ ತೆಲುಗು ಚಿತ್ರರಂಗವು ಸಿಎಂ ಜಗನ್ ಮೋಹನ್ ರೆಡ್ಡಿಗೆ ಮನವಿ ಮಾಡಿತ್ತು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಸ್ಪಂದಿಸಿದ ಜಗನ್ ಮೋಹನ್, ಟಿಕೆಟ್ ದರ ಹೆಚ್ಚಳದ ಬದಲಿಗೆ ರಾಜ್ಯದಾದ್ಯಂತ ಚಿತ್ರಮಂದಿರಗಳ ಟಿಕೆಟ್ ಅನ್ನು ರಾಜ್ಯ ಸರ್ಕಾರವೇ ಮಾರಾಟ ಮಾಡುತ್ತದೆ ಎಂದು ಆದೇಶ ನೀಡಿದರು.
ಇದು ತೆಲುಗು ಚಿತ್ರರಂಗವನ್ನು ತೀವ್ರ ಸಿಟ್ಟಿಗೆ ಗುರಿ ಮಾಡಿದ್ದು, ಪವನ್ ಕಲ್ಯಾಣ್ ಅಂತೂ ಜಗನ್ ವಿರುದ್ಧ ಕಾರ್ಯಕ್ರಮವೊಂದರಲ್ಲಿ ಏಕವಚನದ ವಾಗ್ದಾಳಿ ನಡೆಸಿದರು. ”ನಾವು ಕಷ್ಟ ಪಟ್ಟು ತಗೆದ ಸಿನಿಮಾವನ್ನು ನೀನು ಹೇಗೆ ಮಾರಾಟ ಮಾಡುತ್ತೀಯ” ಎಂದು ಪ್ರಶ್ನೆ ಮಾಡಿದ್ದರು. ಇದೀಗ ಆಂಧ್ರ ಸರ್ಕಾರವು ಹೊಸ ಟಿಕೆಟ್ ದರಗಳನ್ನು ಘೋಷಣೆ ಮಾಡಿದ್ದು, ದರಗಳ ಬಗ್ಗೆ ತೆಲುಗು ಚಿತ್ರರಂಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಹೊಸ ಆದೇಶದಂತೆ, ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿನ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಪ್ರೀಮಿಯಂ ಟಿಕೆಟ್ ದರ 250ರೂ ರು ದಾಟುವಂತಿಲ್ಲ. ಡಿಲಕ್ಸ್ ವಿಭಾಗದ ದರ 150 ರು. ದಾಟುವಂತಿಲ್ಲ. ಎಕಾನಮಿ ಕ್ಲಾಸ್ ಟಿಕೆಟ್ 75 ರು. ದಾಟುವಂತಿಲ್ಲ.
ಎಸಿ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 100 ರು ದಾಟುವಂತಿಲ್ಲ, ಡಿಲಕ್ಸ್ 60 ರು. ಹಾಗೂ ಎಕಾನಮಿ 40 ರು ದಾಟುವಂತಿಲ್ಲ. ನಾನ್ ಎಸಿ ಚಿತ್ರಮಂದಿರಗಳಲ್ಲಿ, ಪ್ರೀಮಿಯಂ ಟಿಕೆಟ್ ದರ 60, ಡಿಲಕ್ಸ್ 40, ಎಕಾನಮಿ 20 ಇರಬೇಕು ಎಂದು ಆದೇಶಿಸಲಾಗಿದೆ.
ಅದೇ ಮುನ್ಸಿಪಾಲಿಟಿ ಪ್ರಾಂಥ್ಯದಲ್ಲಿ ಮಲ್ಟಿಫ್ಲೆಕ್ಸ್ಗಳ ಪ್ರೀಮಿಯಂ ಟಿಕೆಟ್ ದರ 150, ಡಿಲಕ್ಸ್ 100, ಎಕಾನಮಿ 60 ರುಗಳನ್ನು ದಾಟುವಂತಿಲ್ಲ. ಎಸಿ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 70 ರು, ಡಿಲಕ್ಸ್ 50 ರು, ಎಕಾನಮಿ 30 ರು ದಾಟುವಂತಿಲ್ಲ.
ನಗರ ಪಂಚಾಯಿತಿ ವ್ಯಾಪ್ತಿಯಲ್ಲಿನ ಮಲ್ಟಿಫ್ಲೆಕ್ಸ್ನ ಪ್ರೀಮಿಯಂ ಟಿಕೆಟ್ ದರ 120 ರು, ಡಿಲಕ್ಸ್ ಟಿಕೆಟ್ ದರ 80 ರು, ಎಕಾನಮಿ 40 ರುಪಾಯಿ ಬೆಲೆ ದಾಟುವಂತಿಲ್ಲ. ಎಸಿ ಹೊಂದಿದ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 35 ರು, ಡಿಲಕ್ಸ್ 25 ರು, ಎಕಾನಮಿ 15 ರು ದಾಟುವಂತಿಲ್ಲ. ಇನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ಮಲ್ಟಿಫ್ಲೆಕ್ಸ್ ಪ್ರೀಮಿಯಂ ಟಿಕೆಟ್ ಬೆಲೆ 80 ರು, ಡಿಲಕ್ಸ್ 50 ರು, ಎಕಾನಮಿ 30 ರು. ಎಸಿ ಹೊಂದಿದ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 20 ರು. ಡಿಲಕ್ಸ್ 15 ರು, ಎಕಾನಮಿ 10 ರು. ಇನ್ನು ಎಸಿ ಇರದ ಚಿತ್ರಮಂದಿರಗಳ ಪ್ರೀಮಿಯಂ ಟಿಕೆಟ್ ದರ 15, ಡಿಲಕ್ಸ್ 10, ಎಕಾನಮಿ ಕ್ಲಾಸ್ನ ಟಿಕೆಟ್ ದರ 5 ರುಪಾಯಿ ದಾಟುವಂತಿಲ್ಲ.
ಜಗನ್ ಸರ್ಕಾರ ಹೀಗೆಂದು ಆದೇಶ ಜಾರಿ ಮಾಡಿದ್ದು, ಇತ್ತೀಚೆಗೆ ಬಿಡುಗಡೆ ಆಗಿರುವ ಬಾಲಕೃಷ್ಣ ನಟನೆಯ ‘ಅಂಖಂಡ’ ಸಿನಿಮಾ ಇದೇ ಟಿಕೆಟ್ ಬೆಲೆಯಲ್ಲಿ ಆಂಧ್ರ ಪ್ರದೇಶದಲ್ಲಿ ಪ್ರದರ್ಶಿತಗೊಳ್ಳುತ್ತಿದೆ. ಸರ್ಕಾರದ ಆದೇಶ ಉಲ್ಲಂಘಿಸಿ ಹೆಚ್ಚು ಬೆಲೆಗೆ ಟಿಕೆಟ್ ಮಾರಾಟ ಮಾಡಿದಲ್ಲಿ ಕಠಿಣ ಶಿಕ್ಷೆ ಚಿತ್ರಮಂದಿರ ಮಾಲೀಕರು ಹಾಗೂ ವಿತರಕರಿಗೆ ಕಾದಿದೆ.
ಆಂಧ್ರ ಸರ್ಕಾರದ ಈ ಆದೇಶದ ವಿರುದ್ಧ ತೆಲುಗು ಚಿತ್ರರಂಗ ಕೆರಳಿ ಕೆಂಡವಾಗಿದೆ. ಈ ಟಿಕೆಟ್ ದರದಲ್ಲಿ ಚಿತ್ರಕ್ಕೆ ಹಾಕಿರುವ ಬಂಡವಾಳ ವಾಪಸ್ ಬರದು ಎಂದು ಅಂಬೋಣ ಇಡುತ್ತಿದೆ. ಆದರೆ ಜಗನ್ ಸರ್ಕಾರ ಇದಕ್ಕೆಲ್ಲ ಕೇರ್ ಮಾಡುತ್ತಿಲ್ಲ.
ಜಗನ್ ಸರ್ಕಾರ ಹಾಲಿವುಡ್ನವರೊಂದಿಗೆ ಸೇರಿಕೊಂಡು ತೆಲುಗು ಚಿತ್ರರಂಗದ ವಿರುದ್ಧ ಸಂಚು ಹೂಡಿದೆ. ತೆಲುಗು ಚಿತ್ರರಂಗವನ್ನು ತುಳಿಯಲು ಹೀಗೆ ಅನ್ಯಾಯದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದೆ. ಜೂ ಎನ್ಟಿಆರ್, ರಾಮ್ ಚರಣ್ ತೇಜ ನಟನೆಯ ‘ಆರ್ಆರ್ಆರ್’, ಪವನ್ ಕಲ್ಯಾಣ್ ನಟನೆಯ ‘ಭೀಮ್ಲ ನಾಯಕ್’ ಅಂಥಹಾ ಸಿನಿಮಾಗಳನ್ನು ತುಳಿಯಲು ಜಗನ್ ಈ ಸಂಚು ರೂಪಿಸಿದ್ದಾರೆ ಎಂದು ಪವನ್ ಕಲ್ಯಾಣ್ ಆಪ್ತ, ಜನಸೇನಾ ನಾಯಕ ಬೋಲಿ ಶೆಟ್ಟಿ ಸತ್ಯನಾರಾಯಣ ಆರೋಪಿಸಿದ್ದಾರೆ. ಚಿತ್ರಮಂದಿರ ಮಾಲೀಕರ ಸಂಘವು ಜಗನ್ ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದೆ.