ಖ್ಯಾತ ನಟ, ತಮಿಳುನಾಡಿನ ಮಕ್ಕಳ ನಿಧಿ ಮಯಂ ಪಕ್ಷದ ಸ್ಥಾಪಕ ಕಮಲ್ ಹಾಸನ್ ಅವರು ತಮ್ಮ ಪಕ್ಷಕ್ಕಾಗಿ ಸಾರ್ವಜನಿಕರಿಂದ ಮತ್ತೆ ನಿಧಿ ಸಂಗ್ರಹಕ್ಕೆ ಮುಂದಾಗಿದ್ದು, ಭ್ರಷ್ಟಾಚಾರ ಮುಕ್ತ ರಾಜಕಾರಣಕ್ಕಾಗಿ ಈ ಬೆಳವಣಿಗೆ ಅನಿವಾರ್ಯ ಎಂದು ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಗುರುವಾರದಂದು ಕಮಲ್ ಹಾಸನ್ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ತಮ್ಮ ಪಕ್ಷಕ್ಕೆ ದೇಣಿಗೆ ನೀಡಬಹುದು ಎಂದಿದ್ದು, ಮುಂದಿನ ಪೀಳಿಗೆಗೆ ಮಾದರಿ ಸಮಾಜ ನಿರ್ಮಾಣ ಮಾಡಲು ನಮ್ಮ ಪಕ್ಷ ಕಟಿಬದ್ಧವಾಗಿದೆ ಎಂದಿದ್ದಾರೆ.
ಈ ಹಿಂದೆ ಪಕ್ಷಕ್ಕಾಗಿ ತಾವು ಹಣ ಸಂಗ್ರಹಿಸಲು ಮುಂದಾದಾಗ ಹಲವರು ಅಣಕ ಮಾಡಿದ್ದರು. ಆದರೆ ಸಾರ್ವಜನಿಕರು ರಾಜಕೀಯ ಚಟುವಟಿಕೆಗಳಿಗೆ ದೇಣಿಗೆ ನೀಡುವುದರಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.