ಚೆನ್ನೈ: ಕಾಲಿವುಡ್ ಚಿತ್ರರಂಗದ ಹೆಸರಾಂತ ನಿರ್ದೇಶಕರೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾಲಿವುಡ್ ನಿರ್ದೇಶಕ ಸೂರ್ಯ ಪ್ರಕಾಶ್(56) ಸೋಮವಾರ (ಮೇ.27 ರಂದು) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರ ನಿಧನದ ಸುದ್ದಿಯನ್ನು ನಟ ಶರತ್ ಕುಮಾರ್ ಅಧಿಕೃತವಾಗಿ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಕಾಲಿವುಡ್ ನಲ್ಲಿ ʼಮಣಿಕ್ಕಂʼ (1996) ʼಮಾಯಿʼ(2000) ಹಾಗೂ ‘ದಿವಾನ್ʼ(2003) ಸಿನಿಮಾಗಳನ್ನು ಮಾಡಿ ಮಿಂಚಿದ್ದ ಸೂರ್ಯ ಪ್ರಕಾಶ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
“ನಾನು ನಟಿಸಿದ ʼಮಾಯಿʼ ಹಾಗೂ ʼದಿವಾನ್ʼ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ನನ್ನ ಆತ್ಮೀಯ ಸ್ನೇಹಿತ ಸೂರ್ಯ ಪ್ರಕಾಶ್ ಅವರ ಹಠಾತ್ ನಿಧನದಿಂದ ಆಘಾತವಾಗಿದೆ. ನಿನ್ನೆಯಷ್ಟೇ ನಾನು ಅವರೊಂದಿಗೆ ಮಾತನಾಡಿದ್ದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ದೇವರಲ್ಲಿ ಬಳಿ ಕೇಳಿಕೊಳ್ಳುತ್ತೇನೆ” ಎಂದು ನಟ ಶರತ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

