ಕೊಚ್ಚಿ: ಮಾಲಿವುಡ್‌ ಚಿತ್ರರಂಗದ ಮ್ಯೂಸಿಕ್‌ ಡೈರೆಕ್ಟರ್‌ ಒಬ್ಬರು ಖ್ಯಾತ ನಟನಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಮಾಲಿವುಡ್‌ ನಲ್ಲಿ 8 ಜನ ನಿರ್ದೇಶಕರ, 9 ಕಥೆಗಳುಳ್ಳ ‘ಮನೋರಥಂಗಳ್ʼಎನ್ನುವ ಆಂಥಾಲಜಿ ವೆಬ್ ಸಿರೀಸ್‌ ಬರುತ್ತಿದೆ. ಈ ವೆಬ್‌ ಸಿರೀಸನ ಟ್ರೇಲರ್‌ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ.

ಈ ಕಾರ್ಯಕ್ರಮದಲ್ಲಿ ‘ಮನೋರಥಂಗಳ್ʼನಲ್ಲಿ ನಟಿಸಿರುವ ಹಾಗೂ ಅದರಲ್ಲಿ ಕೆಲಸ ಮಾಡಿರುವ ಹಲವರು ಭಾಗಿಯಾಗಿದ್ದರು. ಮಲಯಾಳಂ ಸಂಗೀತ ನಿರ್ದೇಶಕ ರಮೇಶ್ ನಾರಾಯಣ್ ನಟ ಆಸಿಫ್ ಅಲಿ ಅವರಿಗೆ ಸ್ಮರಣಿಕೆಯೊಂದನ್ನು ನೀಡಬೇಕಿತ್ತು. ಹೀಗಾಗಿ ಆಸಿಫ್‌ ಅಲಿ ಅವರು ನಾರಾಯಣ್‌ ಅವರಿಗೆ ಸ್ಮರಣಿಕೆ ನೀಡಲು ಹೋಗಿದ್ದಾರೆ. ಆದರೆ ರಮೇಶ್‌ ನಾರಾಯಾಣ್‌ ಆಸಿಫ್‌ ಅವರಿಂದ ಪ್ರಶಸ್ತಿ ಸ್ವೀಕರಿಸಿದೆ ಹಾಗೆಯೇ ನಿಲ್ಲಿಸಿದ್ದಾರೆ. ಇದರಿಂದ ಆಸಿಫ್‌ ಅವರಿಗೆ ಇರಿಸುಮುರಿಸು ಉಂಟಾಗಿದೆ. ಗೊಂದಲದಿಂದಲೇ ಆಸಿಫ್‌ ರಮೇಶ್‌ ನಾರಾಯಣ್‌ ಅವರ ಕೈಗೆ ಪ್ರಶಸ್ತಿ ಇಟ್ಟಿದ್ದಾರೆ.

ರಮೇಶ್‌ ನಾರಾಯಣ್ ನಿರ್ದೇಶಕ ಜಯರಾಜ್‌ ಅವರನ್ನು ಕರೆದು ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ರಮೇಶ್‌ ನಾರಾಯಣ್‌ ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ರಮೇಶ್ ನಾರಾಯಣ್ ಅವರು ತಮ್ಮ ನಿರ್ದೇಶಕ ಜಯರಾಜ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಲು ಬಯಸಿದ್ದರು. ಈ ಬಗ್ಗೆ ಆಯೋಜಕರಿಗೆ ವಿನಂತಿಸಬೇಕಿತ್ತು. ಆದರೆ ಈ ರೀತಿ ಮಾಡಿದ್ದು ಸರಿಯಲ್ಲ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ಇನ್ನು ‘ನನಗೆ ಆಸಿಫ್‌ ಅವರು ಪ್ರಶಸ್ತಿ ನೀಡುತ್ತಾರೆ ಅಂಥ ಗೊತ್ತಿರಲಿಲ್ಲ. ಅವರು ಅನೇಕ ಕಲಾವಿದರ ನಡುವಿನಿಂದ ಬಂದು ಪ್ರಶಸ್ತಿ ಕೊಟ್ಟರು. ನನಗೆ ಜಯರಾಜ್‌ ಅಲ್ಲಿರಬೇಕಿತ್ತು ಅಂಥ ಅನ್ನಿಸಿತು. ಅದಕ್ಕಾಗಿ ಅವರನ್ನು ನಾನು ಕರೆದೆ. ಅಷ್ಟರಲ್ಲೇ ಆಸಿಫ್‌ ಎಲ್ಲೂ ಹೋಗಿ ಕೂತರು’ ಎಂದು ವಿವಾದ ಎಂದ ಬೆನ್ನಲ್ಲೇ ರಮೇಶ್‌ ಅವರು ಸ್ಪಷ್ಟನೆ ನೀಡಿದ್ದಾರೆ.

— Mohammed Ihsan (@ihsan21792) July 15, 2024