ಕುಂದಾಪುರ: ಗ್ರಾಮೀಣ ಪ್ರದೇಶದಲ್ಲಿದ್ದರೂ ಕೂಡ ಸೇವಾ ಮನೋಭಾವದಿಂದ ತಮ್ಮ ಕೈಲಾದಷ್ಟು ಹಣವನ್ನು ಒಗ್ಗೂಡಿಸಿಕೊಂಡು ಅಶಕ್ತರ ಬಾಳಿಗೆ ನೆರವಾಗುತ್ತಿರುವುದು ನಿಜವಾದ ಸೇವೆ ಎಂದು ಜಿಲ್ಲಾ ಮಾಜಿ ಗವರ್ನರ್ ಲಯನ್ ಸುರೇಶ ಪ್ರಭು ಎಂಜೆಎಫ್ ಹೇಳಿದರು.
ಅಶಕ್ತರ ಸಹಾಯಾರ್ಥವಾಗಿ ಲಯನ್ಸ್ ಕ್ಲಬ್ ಹಕ್ಲಾಡಿ ಚೆನ್ನಕೇಶವ ವತಿಯಿಂದ ಮುಳ್ಳಿಕಟ್ಟೆ ನಗುಸಿಟಿ ಮೈದಾನದಲ್ಲಿ ನಡೆದ ಯಕ್ಷವೈಭವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಪಘಾತದಲ್ಲಿ ಗಾಯಗೊಂಡು ಎರಡು ಕಾಲಿನ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿಕೊಂಡಿರುವ ವಿದ್ಯಾರ್ಥಿ ತನ್ವಿ ಹಾಗೂ ಅಕಾಲಿಕವಾಗಿ ಮರಣ ಹೊಂದಿದ ಸತೀಶ್ ಆಚಾರ್ಯ ಯಳೂರು ಅವರ ಮಕ್ಕಳ ಶಿಕ್ಷಣಕ್ಕೆ ಮತ್ತು ಗುದದ್ವಾರದಲ್ಲಿ ಸಮಸ್ಯೆಯಿಂದ ಬಳಲುತ್ತಿರುವ ಸುರೇಂದ್ರ ಮೊಗವೀರ ಅವರ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವನ್ನು ಯಕ್ಷರಂಗದಲ್ಲಿ ವಿತರಿಸಲಾಯಿತು.ಶಶಿಕಲಾ ಆಚಾರ್ಯ ಅವರ ಮನೆ ನಿರ್ಮಾಣಕ್ಕೆ ಧನ ಸಹಾಯ ಮತ್ತು 10 ಚೀಲ ಸಿಮೆಂಟ್ನ್ನು ಕೊಡುಗೆ ಆಗಿ ನೀಡಲಾಯಿತು.
ಸಮಾಜಿಕ ಕಳಕಳಿಯಿಂದ ಸೇವೆಯನ್ನು ಮಾಡುತ್ತಿರುವ ಬೆಂಕಿಮಣಿ ಸಂತೋಷ ಮತ್ತು ಸಾಲಿಗ್ರಾಮ ಮೇಳದ ವ್ಯವಸ್ಥಾಪಕರಾದ ಪ್ರಶಾಂತ್ ಶೆಟ್ಟಿ ಅವರನ್ನು ಗೌರವಿಸಲಾಯಿತು, ಮೇಳದ ಕಲಾವಿದರಿಗೆ ಧನಸಹಾಯ ವಿತರಿಸಲಾಯಿತು.
ರೀಜನ್ ಚೇರ್ ಪರ್ಸನ್ ಕಿರಣ್ ಕುಂದಾಪುರ,ಜೋನ್ ಚೇರ್ ಪರ್ಸನ್ ಲಯನ್ ನರಸಿಂಹ ದೇವಾಡಿಗ,ಸ್ಥಾಪಕಾಧ್ಯಕ್ಷ ಸಂತೋಷ ಕುಮಾರ್ ಶೆಟ್ಟಿ,ಸತೀಶ್ ಕುಮಾರ್ ಶೆಟ್ಟಿ,ಸುಭಾಷ್ ಚಂದ್ರ ಶೆಟ್ಟಿ,ಗಣಪಯ್ಯ ಶೆಟ್ಟಿ,ಹಕ್ಲಾಡಿ ಕ್ಲಬ್ಬಿನ ಅಧ್ಯಕ್ಷ ನಾಗೇಶ್ ಪೂಜಾರಿ,ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಯಳೂರು,ಕೋಶಾಧಿಕಾರಿ ಸುರೇಶ ಹಕ್ಲಾಡಿ,ಮಂಜು ಪೂಜಾರಿ ಬೆಳ್ಳಾಡಿ ಉಪಸ್ಥಿತರಿದ್ದರು.
ಡಾ.ಕಿಶೋರ್ ಕುಮಾರ್ ಶೆಟ್ಟಿ ನಿರ್ವಹಿಸಿದರು.ಯಕ್ಷವೈಭವದ ಅಂಗವಾಗಿ ಸಾಲಿಗ್ರಾಮ ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ನಡೆಯಿತು.