ಕಾನ್ಸ್‌: ಕರ್ನಾಟಕದ ಜಾನಪದವನ್ನು ಆಧಾರವಾಗಿ ಇಟ್ಟು ಕೊಂಡು ತಯಾರಿಸಲಾದ “ಸೂರ್ಯ ಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು’ ಕಿರು ಚಿತ್ರಕ್ಕೆ ಪ್ರತಿಷ್ಠಿತ ಲಾ ಸಿನೆಫ್ ಗೌರವ ದೊರೆತಿದೆ. ಈ ಸಿನೆಮಾದ ನಿರ್ದೇಶಕ ಕೂಡ ಮೈಸೂರಿನವರಾಗಿದ್ದು,ಫ್ರಾನ್ಸ್‌ನ ಕಾನ್ಸ್‌ ಚಿತ್ರೋತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಚಿತ್ರದ ನಿರ್ದೇಶಕ ಚಿದಾನಂದ ನಾಯಕ್‌ ಪುಣೆಯ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ (ಎಫ್ಟಿಐಐ) ದಲ್ಲಿ ವ್ಯಾಸಂಗ ಮಾಡುತ್ತಿದ್ದು, ಸೂರ್ಯ ಹುಟ್ಟಬಾರದು ಎಂದು ಕೋಳಿ ಕದಿಯುವ ಮಹಿಳೆಯೊಬ್ಬಳ ಕಥೆಯನ್ನು ಆಧಾರವಾಗಿಟ್ಟುಕೊಂಡು ಈ ಸಿನೆಮಾ ತಯಾರಿಸಿದ್ದಾರೆ.

ಎಫ್ಟಿಐಐ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಭಾರತಕ್ಕೆ ಇದು ಹೆಮ್ಮೆಯ ಕ್ಷಣವಾಗಿದೆ. ನಮ್ಮ ವಿದ್ಯಾರ್ಥಿಯ ಚಿತ್ರಕ್ಕೆ ಕ್ಯಾನೆಸ್‌ ಚಲನಚಿತ್ರೋತ್ಸವದಲ್ಲಿ ಲಾ ಸಿನೆಫ್ ಗೌರವ ದೊರೆತಿದೆ ಎಂದು ಹೇಳಿದೆ.

ಲಾ ಸಿನೆಫ್ ಕ್ಯಾನೆಸ್‌ ಚಲನಚಿತ್ರೋತ್ಸವದ ಅಂಗಸಂಸ್ಥೆಯಾಗಿದ್ದು, ಟೆಲಿವಿಷನ್‌ ಸಂಸ್ಥೆಗಳು, ನಟನಾ ಶಾಲೆಗಳು ತಯಾರಿಸುವ ಚಿತ್ರಗಳನ್ನು ಗುರುತಿಸಿ ಅವುಗಳಿಗೆ ಪ್ರಶಸ್ತಿ ನೀಡುತ್ತದೆ.
ಇನ್ನು “ಚಿದಾನಂದ ನಾಯಕ್‌ ಅವರ ಕಿರುಚಿತ್ರಕ್ಕೆ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ನಟ ಯಶ್‌, ರಾಜ್ಯದ ಜಾನಪದವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದ ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತಿದೆ” ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

https://x.com/TheNameIsYash/status/1793865716128776554