ಮುಂಬೈ: ಸ್ಟ್ರೀಮಿಂಗ್ ಶೋ ‘ಗಂದಿ ಬಾತ್’ ತನ್ನ ಕಂಟೆಂಟ್ಗಳಿಂದ ಆಗಾಗ್ಗೆ ವಿವಾದ ಹುಟ್ಟುಹಾಕುತ್ತಿದೆ. ಈ ಬಾರಿ ಹಿಂದು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬ ಆರೋಪ ಎದುರಾಗಿದೆ. ಅಡಲ್ಟ್ ಕಾಮಿಡಿ ವೆಬ್-ಸರಣಿ ಕಾರ್ಯಕ್ರಮದಲ್ಲಿ ಲಕ್ಷ್ಮಿದೇವಿಯನ್ನು ಹೋಲುವ ಪೋಸ್ಟರ್ನ್ನು ಶೋ ನಿರ್ವಹಿಸುವ ತಂಡ ಹಂಚಿಕೊಂಡಿದ್ದು, ಪೋಸ್ಟರ್ನಲ್ಲಿ, ಭಾರತೀಯ ಉಡುಗೆಯನ್ನು ಧರಿಸಿರುವ ಮಹಿಳೆಯನ್ನು ಕಾಣಬಹುದು. ಅದೇ ರೀತಿ ಎರಡು ನವಿಲುಗಳು, ಕಮಲದ ಹೂವು ಕೂಡ ಇದೆ. ಇದು ಹಿಂದು ದೇವರಾದ ಲಕ್ಷ್ಮಿಯನ್ನು ಹೋಲುತ್ತಿದ್ದು, ಧಾರ್ಮಿಕ ಭಾವನೆಗಳನ್ನು ನೋಯಿಸುತ್ತಿದೆ ಎಂದು ಹಲವು ಟ್ವಿಟರ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇಂತಹ ಹೊಲಸುಗಳನ್ನು ನಿಲ್ಲಿಸಿ. @TeamEktaKapoor ನಮ್ಮ ದೇವರು ಮತ್ತು ದೇವತೆಗಳನ್ನು ಅವಮಾನಿಸುವ ಕಾರ್ಯಕ್ರಮದಿಂದ ನೀವು ಹಣ ಮಾಡಬೇಕಿಲ್ಲ ಎಂದು ಓರ್ವ ಟ್ವೀಟ್ ಬಳಕೆದಾರರು ಹೇಳಿದ್ದಾರೆ. ಮತ್ತೊಬ್ಬರು ಟ್ವೀಟ್ ಮಾಡಿ, “#ಏಕ್ತಾ ಕಪೂರ್ ಧಾರಾವಾಹಿಗಳನ್ನು ನಿಷೇಧಿಸಿ ಎಂದು ಹೇಳಿದ್ದಾರೆ. ಗಂದಿ ಬಾತ್’ ವಯಸ್ಕ ಹಾಸ್ಯ ವೆಬ್ ಸರಣಿಯಾಗಿದ್ದು, ಏಕ್ತಾ ಕಪೂರ್ ಒಡೆತನದ ಎಎಲ್ಟಿ ಬಾಲಾಜಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಪ್ರಸ್ತುತ ಅದರ 7 ನೇ ಸೀಸನ್ ಚಾಲನೆಯಲ್ಲಿದೆ.