ಮುಂಬೈ: ಕೋವಿಡ್ ಸಮಯದಲ್ಲಿ ಕಾಸ್ಟಿಂಗ್ ಕೌಚ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹಲವು ನಟಿಯರು ಆ ವೇಳೆ ನಟರು, ನಿರ್ದೇಶಕರ ವಿರುದ್ಧ ಕಿರುಕುಳದ ಕುರಿತು ವರದಿ ಮಾಡಿದ್ದರು. ಅದೇ ರೀತಿ ನಟಿಯೊಬ್ಬರು ತಮಗಾದ ಕಹಿ ಅನುಭವವನ್ನು ಇದೀಗ ಹಂಚಿಕೊಂಡಿದ್ದಾರೆ.
‘ತೇರಿ ಮೇರಿ ದೂರಿಯಾ’, ‘ಬಾಬರ್’ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಖ್ಯಾತಿ ಹಿಂದಿ ಕಿರುತೆರೆ ನಟಿ ಹಿಮಾಂಶಿ ಪರಾಷರ್ಗೆ ಸಲ್ಲುತ್ತದೆ. ಇಂತಹ ನಟಿಗೂ ಹಿಂದೆ ಕಾಸ್ಟಿಂಗ್ ಕೌಚ್ ಕಾಡಿತ್ತಂತೆ.
ಈ ಬಗ್ಗೆ ಇತ್ತೀಚೆಗಷ್ಟೆ ಹೇಳಿಕೊಂಡಿರುವ ಹಿಮಾಂಶಿ, ‘ನಿಮಗೆ ದೊಡ್ಡ ಅವಕಾಶ ನೀಡುತ್ತೇನೆ. ಆದರೆ, ನೀವು ಅಡ್ಜಸ್ಟ್ ಮಾಡಿಕೊಳ್ಳಬೇಕಷ್ಟೇ ಎಂದು ನಿರ್ದೇಶಕರೊಬ್ಬರು ಹೇಳಿದ್ದರು. ಆ ಬಗ್ಗೆ ನಾನು ಮತ್ತೊಬ್ಬರ ಬಳಿ ಹೇಳಿದೆ. ಅದಕ್ಕೆ ಅವರು ಸಹ, ‘ಈ ಫೀಲ್ಡಲ್ಲಿ ಇದೆಲ್ಲಾ ಮಾಮೂಲಿ’ ಎಂದರು.
ಹೀಗೆಲ್ಲಾ ಮಾಡಲೇಬೇಕು ಅಂದರೆ ನನಗೆ ಸಿನಿಮಾ ಕ್ಷೇತ್ರವೇ ಬೇಡ. ಇನ್ನಷ್ಟು ಓದಿಕೊಂಡು ಕೆಲಸಕ್ಕೆ ಸೇರುವುದೇ ಒಳ್ಳೆಯದು ಅಂತಂದುಕೊಂಡಿದ್ದೆ. ಆದರೆ, ಆ ಘಟನೆಯ ಬಳಿಕ ನನಗೆ ಮತ್ತೆ ಅಂತಹ ಪರಿಸ್ಥಿತಿ ಎದುರಾಗಲಿಲ್ಲ. ಹೀಗಾಗಿ ಇಲ್ಲಿಯೇ ಮುಂದುವರಿಯಲು ತೀರ್ಮಾನಿಸಿದೆ’ ಎಂದು ಹೇಳಿದ್ದಾರೆ.