ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರ ಪುತ್ರ ವಿನೀಶ್, ತಂದೆಯನ್ನು ನೆನೆದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ.
“ನಾನು 15 ವರ್ಷದ ಹುಡುಗನಿದ್ದೇನೆ. ನನಗೂ ಮನಸ್ಸಿದೆ, ಭಾವನೆಗಳಿವೆ ಅನ್ನೋದನ್ನ ಪರಿಗಣಿಸದೇ ನನ್ನ ತಂದೆಯ ಬಗ್ಗೆ ಕೆಟ್ಟ ಕಾಮೆಂಟ್ಸ್ ಮತ್ತು ಆಕ್ಷೇಪಾರ್ಹ ಭಾಷೆಯಲ್ಲಿ ನಿಂದಿಸುತ್ತಿರುವವರಿಗೆ ಧನ್ಯವಾದಗಳು. ನನ್ನ ತಂದೆ ಮತ್ತು ತಾಯಿಯ ಬೆಂಬಲದ ಅಗತ್ಯವಿರುವ ಈ ಕಷ್ಟದ ಸಮಯದಲ್ಲಿಯೂ ನನ್ನನ್ನು ಶಪಿಸುವುದರಿಂದ ನೀವು ಬದಲಾಗುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.
ನಟರೂ ಆಗಿರುವ ಆರೋಪಿ ದರ್ಶನ್ ತೂಗುದೀಪ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪ ಪ್ರಕರಣದಲ್ಲಿ ಕೆಲ ಪ್ರಭಾವಿಗಳು ದರ್ಶನ್ ರಕ್ಷಿಸಲು ಪ್ರಯತ್ನ ನಡೆಸಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಕರೆಗಳನ್ನು ಮಾಡಿ ಒತ್ತಡ ಹೇರುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ.
Ad