ಮುಂಬೈ : ಬಾಲಿವುಡ್ ನಟ ಸಿದ್ಧಾರ್ಥ್ ಶುಕ್ಲಾ ಕಣ್ಮರೆಯಾಗಿ ಮೂರು ತಿಂಗಳು ಗತಿಸಿದೆ. ಅವರ ಸಾವನ್ನು ಜೀರ್ಣಿಸಿಕೊಳ್ಳಲು ಇನ್ನೂ ಅವರ ಅಭಿಮಾನಿಗಳು, ಕುಟುಂಬಸ್ಥರಿಗೆ ಆಗುತ್ತಿಲ್ಲ. ಅದರಲ್ಲಿಯೂ ಅವರ ಸ್ನೇಹಿತೆ ಶೆಹನಾಜ್ ಗಿಲ್ ಇನ್ನೂ ಆ ನೋವಿನಿಂದ ಹೊರಕ್ಕೆ ಬರಲಿಲ್ಲ. ಅದಾಗಲೇ ಅವರಿಗೆ ಇನ್ನೊಂದು ದೊಡ್ಡ ಶಾಕ್ ಎದುರಾಗಿದೆ.
ಅದೇನೆಂದರೆ ಶೆಹನಾಜ್ ಅವರ ತಂದೆ ಸಂತೋಖ್ ಸಿಂಗ್ ಅಲಿಯಾಸ್ ಸುಖ್ ಮೇಲೆ ಗುಂಡಿನ ದಾಳಿ ನಡೆದಿದೆ. ಅಲ್ಪದರಲ್ಲಿಯೇ ಅವರು ತಪ್ಪಿಸಿಕೊಂಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಮೃತ್ಸರದಿಂದ ಬಿಯಾಸ್ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿದೆ. ದಾರಿಯ ಮಧ್ಯೆ ಅವರ ಭದ್ರತಾ ಸಿಬ್ಬಂದಿ ವಾಶ್ರೂಂಗೆ ತೆರಳಲು ಡಾಬಾ ಒಂದರಲ್ಲಿ ಕಾರನ್ನು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಸಂತೋಖ್ ಕಾರಿನಲ್ಲಿ ಒಬ್ಬರೇ ಇದ್ದರು. ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ.
ಕೂಡಲೇ ಗನ್ಮೆನ್ ಓಡಿ ಬಂದಿದ್ದಾರೆ. ಆಗ ದುಷ್ಕರ್ಮಿಗಳು ಓಡಿಹೋಗಿದ್ದಾರೆ. ಗುಂಡಿನ ಶಬ್ದ ಕೇಳುತ್ತಲೇ ಕಾರಿನಲ್ಲಿ ಅಡಗಿ ಕುಳಿತುಕೊಂಡಿದ್ದರಿಂದ ಪ್ರಾಣಕ್ಕೆ ಅಪಾಯವಾಗಲಿಲ್ಲ ಎಂದಿರುವ ಪೊಲೀಸರು ಬುಲೆಟ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಂಜಾಬ್ ರಾಜಕೀಯದಲ್ಲಿ ಸಕ್ರೀಯರಾಗಿರುವ ಸಂತೋಖ್ ಸಿಂಗ್, ಇತ್ತೀಚೆಗೆ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದರು. ಇದನ್ನು ಹಲವರು ವಿರೋಧಿಸಿದ್ದರು. ಇದೇ ಅವರ ಪ್ರಾಣಕ್ಕೆ ಸಂಚಕಾರ ತಂದಿರಬಹುದು ಎಂದು ಊಹಿಸಲಾಗಿದೆ. ಬಿಜೆಪಿಗೆ ಸೇರಿದ್ದನ್ನು ಸಹಿಸದದವರು ಅವರ ಮೇಲೆ ಗುಂಡಿನ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿದ್ದಾರ್ಥ್ ಶುಕ್ಲಾ ಹಾಗೂ ಶೆಹನಾಜ್ ಗಿಲ್ ಇವರಿಬ್ಬರೂ ಹಿಂದಿ ಬಿಗ್ ಬಾಸ್ನ ಸೀಜನ್ 13ರಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಇಬ್ಬರೂ ಪ್ರೀತಿಸಲು ಶುರು ಮಾಡಿದ್ದರು. ಈ ಸೀಜನ್ನಲ್ಲಿ ಸಿದ್ಧಾರ್ಥ್ ಗೆದ್ದಿದ್ದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆಯೇ ಸಿದ್ಧಾರ್ಥ್ ಕಳೆದ ಸೆಪ್ಟೆಂಬರ್ನಲ್ಲಿ ಮೃತಪಟ್ಟಿದ್ದಾರೆ.