ಕೋಲ್ಕತ್ತಾ, ಜೂನ್. 1: ಬಾಲಿವುಡ್ ಖ್ಯಾತ ಗಾಯಕ-ಸಂಗೀತ ನಿರ್ದೇಶಕ ಕೃಷ್ಣಕುಮಾರ್ ಕೋಲ್ಕತ್ತಾದಲ್ಲಿ ಕುಸಿದುಬಿದ್ದು ಮೃತಪಟಿದ್ದಾರೆ. 53 ವರ್ಷದ ಕೆಕೆ ಸಾವಿನಿಂದ ಸಂಗೀತ ಪ್ರಿಯರು, ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಕೆಕೆ ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕೋಲ್ಕತ್ತಾದ ನಜ್ರುಲ್ ಮಂಚಾ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಈ ವೇಳೆ ಸುಸ್ತು ಕಾಣಿಸಿಕೊಂಡಿತ್ತು, ನಂತರ ಹೋಟೆಲ್ಗೆ ಹಿಂದಿರುಗಿದ್ದ ಅವರು ತೀವ್ರ ಅಸ್ವಸ್ತರಾದರು ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಆದರೆ ಅಷ್ಟರಲ್ಲಾಗಲೇ ಖ್ಯಾತ ಗಾಯಕ ಇಹಲೋಕ ತ್ಯಜಿಸಿದ್ದರು. ಕೆಕೆ ಮೃತಪಟ್ಟಿರುವುದಾಗಿ ಸಿಎಂಆರ್ಐ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.
ಕೋಲ್ಕತಾದಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಕೆಕೆ ತಂಡ ಮೇ.30ರಂದು ನಗರಕ್ಕೆ ಬಂದಿತ್ತು. ಸಂಗೀತ ಕಾರ್ಯಕ್ರಮದ ಕುರಿತು ಗಾಯಕ ಕೃಷ್ಣಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕೆಕೆ ಸಂಗೀತ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿತ್ತು.
ಕೆಕೆ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. 1990ರ ದಶಕದಲ್ಲಿ ಕೆಕೆ ಹಾಡಿದ ಹಾಡುಗಳು ಜನಪ್ರಿಯವಾಗಿದ್ದವು.
ಅವರ 1999 ರ ಮೊದಲ ಆಲ್ಬಂ ‘ಪಲ್’ ವಿಮರ್ಶಾತ್ಮಕವಾಗಿ ಮೆಚ್ಚುಗೆಗಳಿಸಿತು. 2000 ರ ದಶಕದ ಆರಂಭದಿಂದ, ಅವರು ಹಿನ್ನೆಲೆ ಗಾಯನದಲ್ಲಿ ವೃತ್ತಿಜೀವನ ಆರಂಭಿಸಿದರು. ಹಿಂದಿ ಚಿತ್ರರಂಗದಲ್ಲಿ ಹಲವು ಜನಪ್ರಿಯ ಹಾಡುಗಳನ್ನು ಕೆಕೆ ಹಾಡಿದ್ದಾರೆ.
ಕೆಕೆ ಸಾವಿನಿಂದ ಬಾಲಿವುಡ್ ಮಾತ್ರವಲ್ಲದೆ ಸಂಗೀತಪ್ರಿಯರು ಆಘಾತಕ್ಕೊಳಗಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೆಕೆ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದು, ಸಾವು ಆಘಾತ ತಂದಿದೆ ಎಂದಿದ್ದಾರೆ.