ದಕ್ಷಿಣ ಕನ್ನಡ : ಖ್ಯಾತ ಬಾಲಿವುಡ್ ನಟಿ ಕತ್ರಿನಾ ಕೈಫ್ ಮಂಗಳವಾರ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಿ ಕ್ಷೇತ್ರದಲ್ಲಿ ನಡೆಯುವ ಪ್ರಮುಖ ಸರ್ಪಸಂಸ್ಕಾರ ಸೇವೆಯನ್ನು ನೆರವೇರಿಸಿದ್ದಾರೆ.

ಆಶ್ಲೇಷ ನಕ್ಷತ್ರದ ದಿನವಾದ ಮಂಗಳವಾರ ಕ್ಷೇತ್ರಕ್ಕೆ ಆಗಮಿಸಿದ ಕತ್ರಿನಾ ಬೆಳಗ್ಗೆ ಸರ್ಪಸಂಸ್ಕಾರ ಪೂಜೆಯನ್ನು ಆದಿ ಸುಬ್ರಹ್ಮಣ್ಯದ ಸರ್ಪಸಂಸ್ಕಾರ ಯಾಗಶಾಲೆಯಲ್ಲಿ ನೆರವೇರಿಸಿದರು. ಬಳಿಕ ಮಧ್ಯಾಹ್ನ ಕ್ಷೇತ್ರದಲ್ಲಿ ಅನ್ನಪ್ರಸಾದ ಸ್ವೀಕರಿಸಿದ್ದು, ಬುದವಾರ ಬೆಳಕ್ಕೆ ಮತ್ತೆ ಸರ್ಪಸಂಸ್ಕಾರ ಸೇವೆಯ ವಿಧಿವಿಧಾನಗಳಲ್ಲಿ ಭಾಗಿಯಾಗಲಿದ್ದಾರೆ.

ಸಂತಾನಪ್ರಾಪ್ತಿ, ವೃತ್ತಿ ಬದುಕಿನಲ್ಲಿ ಸಫಲತೆ ಮತ್ತು ಕುಟುಂಬದ ಯೋಗಕ್ಷೇಮದ ಉದ್ಧೇಶದಿಂದ ಕತ್ರಿನಾ ಸೇವೆಯನ್ನು ಮಾಡಿದ್ದಾರೆ. ನಟ ವಿಕ್ಕಿ ಕೌಶಲ್ ಜೊತೆ ವಿವಾಹವಾಗಿ ಮೂರು ವರ್ಷಗಳು ಕಳೆದರೂ ಸಂತಾನ ಪ್ರಾಪ್ತಿಯಾಗದ ಹಿನ್ನಲೆಯಲ್ಲಿ ನಟಿ ಕುಕ್ಕೆಯಲ್ಲಿ ಈ ಸೇವೆ ನೆರವೇರಿಸಿದ್ದು, ಬುಧವಾರ ಮಧ್ಯಾಹ್ನ ತನಕ ಸರ್ಪಸಂಸ್ಕಾರ ಸೇವೆಯ ವಿಧಿ-ವಿಧಾನಗಳು‌ ನಡೆಯಲಿದೆ.

ಕತ್ರಿನಾ ಪೂಜೆ ನೆರವೇರಿಸುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರದ ವತಿಯಿಂದ ವಿಶೇಷ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಆಶ್ಲೇಷ ನಕ್ಷತ್ರದ ಹಿನ್ನಲೆಯಲ್ಲಿ ಮಾಹಿತಿ ಪ್ರಕಾರ ಇಂದು ಕತ್ರಿನಾ ಮತ್ತು ನಟ ಮಿಕ್ಕಿ ಕೌಶಲ್ ಕ್ಷೇತ್ರಕ್ಕೆ ಆಗಮಿಸಿ ಸೇವೆ ಸಲ್ಲಿಸಬೇಕಾಗಿತ್ತು.

ಆದರೆ ವಿಕ್ಕಿ ಕೌಶಲ್ ಬೇರೆ ಕಾರ್ಯನಿಮಿತ್ತ ಕ್ಷೇತ್ರಕ್ಕೆ ಆಗಮಿಸಲಾಗದ ಹಿನ್ನಲೆಯಲ್ಲಿ ಕತ್ರಿನಾ ಒಬ್ಬರೇ ಪೂಜೆಗಾಗಿ ಆಗಮಿಸಿದ್ದಾರೆ‌ ಆಶ್ಲೇಷ ನಕ್ಷತ್ರ ಸುಬ್ರಹ್ಮಣ್ಯ ಅತ್ಯಂತ ಪ್ರೀತಿಯ ನಕ್ಷತ್ರವಾಗಿದ್ದು, ಈ ದಿನದಂದು ಸೇವೆ ಸಲ್ಲಿಸಿದರೆ ಹೆಚ್ಚು ಫಲಪ್ರದವಾಗುತ್ತದೆ ಎನ್ನುವ ನಂಬಿಕೆ ಇಲ್ಲಿದೆ. ಕತ್ರಿನಾ ಇಂದು ರಾತ್ರಿ ಸುಬ್ರಹ್ಮಣ್ಯ ಖಾಸಗಿ ವಸತಿಗೃಹದಲ್ಲಿ ತಂಗಲಿದ್ದು, ಬುಧವಾರ ಮುಂಜಾನೆ ಮತ್ತೆ ಸರ್ಪಸಂಸ್ಕಾರ ಸೇವೆಯಲ್ಲಿ ಪಾಲ್ಗೊಳ್ಳಿದ್ದಾರೆ.