ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾದ ಬಳಿಕ ಮೊದಲ ಬಾರಿಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ನಾವೆಲ್ಲರೂ ಶಾಕ್ನಲ್ಲಿದ್ದು ನೋವನ್ನು ಅನುಭವಿಸುತ್ತಿದ್ದೇವೆ. ನನ್ನ ಮೌನವನ್ನು ಬೇರೆ ರೀತಿ ಬಿಂಬಿಸುತ್ತಿದ್ದಾರೆ. ಅಭಿಮಾನಿಗಳು ಬೇರೆ ರೀತಿ ತಿಳಿದುಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ನನ್ನ ಅಭಿಪ್ರಾಯ ಹೊರಗೆ ಹಾಕಿದ್ದೇನೆ ಎಂದರು.
ಕೊಲೆ ಕೇಸ್ ಕೋರ್ಟ್ನಲ್ಲಿ ಇರುವ ಕಾರಣ ನಾನು ಹೆಚ್ಚಾಗಿ ಮಾತನಾಡಲು ಆಗಲ್ಲ. ದರ್ಶನ್ ಜನರಿಗೆ ಸಹಾಯ ಮಾಡುವಂತಹ ವ್ಯಕ್ತಿ. ನಾನು ಆ ರೀತಿಯ ದರ್ಶನ್ ಮಾತ್ರ ನೋಡಿದ್ದೇನೆ. ಬೇರೆ ದರ್ಶನ್ನ ನಾನು ನೋಡಿಲ್ಲ. ಮಗನ ರೀತಿಯಲ್ಲಿ ನಾನು ಅವನನ್ನು ನೋಡಿದ್ದೇನೆ. ತಾಯಿಯಾಗಿ ನಾನು ಅವನು ಹೀಗೆ ಮಾಡಿರುವುದನ್ನು ನಂಬಲ್ಲ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ನಾನು ಒಬ್ಬ ತಾಯಿಯಾಗಿದ್ದು, ರೇಣುಕಾಸ್ವಾಮಿ ತಾಯಿ ಆಳುವುದನ್ನು ನೋಡಿದ್ದೇನೆ. ಆ ಪತ್ನಿ ಆಳುವುದನ್ನು ನೋಡಿದ್ದೇನೆ. ನನಗೂ ಈ ಘಟನೆಯಿಂದ ನೋವಾಗಿದೆ. ಸತ್ಯ ಹೊರಗೆ ಬರಬೇಕು. ಮೊದಲ ದಿನದಿಂದಲೇ ಆರೋಪಿಯಿಂದ ಅಪರಾಧಿ ಮಾಡಲು ಬೇಡ ಎಂಬುದು ನನ್ನ ಅನಿಸಿಕೆ. ಅವರು ಏನು ಮಾಡಿದ್ದಾರೆ, ಏನು ಮಾಡಿಲ್ಲ ಎಂಬುದು ಹೊರಗೆ ಬರಲಿ. ಕಾನೂನು ನಾಳೆ ಏನು ಹೇಳುತ್ತದೆ ಎಂಬುದನ್ನು ನಾವು ಒಪ್ಪಲೇಬೇಕು.

