ಮಸ್ಕತ್:  ‘ಆಮಿ ಆನಿ ಆಮ್ಚಿಂ’ ಸಂಘಟನೆಯ ‘ಪೆಪೆರೆ ಪೆಪೆ ಢುಂ’ ಬ್ರಾಸ್ ಬ್ಯಾಂಡ್ ಹಬ್ಬದ ಎರಡನೇ ಆವೃತ್ತಿ ಮಸ್ಕತ್ ನಲ್ಲಿ  ಅಕ್ಟೋಬರ್ 10 ರಂದು ಅದ್ಧೂರಿಯಾಗಿ ನೆರವೇರಿತು.  ರುವಿಯ ಅಲ್ ಫಲಾಜ್ ಹೋಟೆಲ್ ನಲ್ಲಿ ಕಿಕ್ಕಿರಿದ ಕಲಾಭಿಮಾನಿಗಳ ಸಮ್ಮುಖದಲ್ಲಿ ನಾಲ್ಕು ತಂಡಗಳ ನಡುವೆ ನಡೆದ  ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ‘ದಬಕ್ ದಬ ಕಲಾಕಾರ್’ ತಂಡವು ಪ್ರಥಮ ಸ್ಥಾನವನ್ನು ಪಡೆದು ಪ್ರಶಸ್ತಿ ಯೊಂದಿಗೆ 1000 ಮಸ್ಕತ್ ರಿಯಲ್ ( ರೂ. 2,30,000)  ತನ್ನದಾಗಿಸಿತು.

ಕರಾವಳಿಯ ಕೊಂಕಣಿ ಸಂಗೀತ ಲೋಕದಲ್ಲಿ ಬ್ರಾಸ್ ಬ್ಯಾಂಡ್ ಕಲೆಯನ್ನು ಉತ್ತೇಜಿಸಿ ಅದಕ್ಕೆ ಮನ್ನಣೆ ನೀಡಬೇಕೆಂಬ ಉದ್ದೇಶದಿಂದ ಆರಂಬಿಸಿದ ಈ ಕಾರ್ಯಕ್ರಮ ಇದೇ ಮೊದಲ ಬಾರಿಗೆ ಗಲ್ಫ್ ರಾಷ್ಟ್ರದ ವೇದಿಕೆಗೆ ಕಾಲಿಟ್ಟಿತು. ಕಾರ್ಯಕ್ರಮಕ್ಕೆ ಜನರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದ್ದು, ಇಡೀ ಸಭಾಂಗಣ ಜನರಿಂದ ತುಂಬಿ ತುಳುಕುತಿತ್ತು.

ಸ್ಪರ್ಧೆಯಲ್ಲಿ  ನಾಲ್ಕು ತಂಡಗಳು ಭಾಗವಹಿಸಿದ್ದು ಸುಮಾರು 200 ಕಲಾವಿದರು ವೇದಿಕೆಯಲ್ಲಿ ಮಿಂಚಿದರು.   ಮಸ್ಕತ್ ಚಿಂ ನಕ್ತಿರಾಂ, ದಬಕ್ ದಬಾ ಕಲಾಕಾರ್,  ಗಾಂವ್ಚಿಂ ಮೊತಿಯಾಂ, ತೆನ್ಕಾಂತ್ಲಿಂ ತಾಲೆಂತಾಂ ಈ ನಾಲ್ಕು ತಂಡಗಳು ಕೊಂಕಣಿ ಹಾಡುಗಳು, ಬಾಯ್ಲಾ ನೃತ್ಯ, ವಾಲ್ಟ್ಜ್, ಜೈವ್ ಹಾಗೂ ಹುಲಿ ನೃತ್ಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದವು.

ಅತ್ಯುತ್ತಮ ಪ್ರದರ್ಶನ ನೀಡಿದ ದಬಕ್ ದಬಾ ಪಂಗಡ ತಂಡವು ಮೊದಲ ಬಹುಮಾನ (1,000 ಒಮಾನಿ ರಿಯಲ್ – ರೂ. 2.3 ಲಕ್ಷ) ಗೆದ್ದುಕೊಂಡಿತು. ಉಳಿದ ಮೂರು ತಂಡಗಳಿಗೆ ತಲಾ 500 ಒಮಾನಿ ರಿಯಲ್ (ರೂ. 1.15 ಲಕ್ಷ) ಮೊತ್ತದ ದ್ವಿತೀಯ ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ   ಮುಖ್ಯ ಅತಿಥಿಯಾಗಿ ಅನಿವಾಸಿ ಭಾರತೀಯ ಉದ್ಯಮಿ ಶ್ರೀ ರೊನಾಲ್ಡ್ ಕೊಲಾಸೊ ಹಾಜರಿದ್ದು  ಬ್ರಾಸ್ ಬ್ಯಾಂಡ್ ಜನಪ್ರಿಯತೆ ಗಾಗಿ ಶ್ರಮಿಸುತ್ತಿರುವ  ‘ಆಮಿ ಆನಿ ಆಮ್ಚಿಂ’ ತಂಡಕ್ಕೆ ಅವರು ಅಭಿನಂದಿಸಿದರು ಅಲ್ಲದೇ ಅತ್ಯುತ್ತಮವಾಗಿ ಕಾರ್ಯಕ್ರಮ ಆಯೋಜಿಸಿದ ಎಮ್ ಸಿಸಿಪಿ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸುಮಾರು 5  ಗಂಟೆಗಳ ಕಾಲ  ಬ್ಯಾಂಡ್ ವಾದ್ಯವನ್ನು  ನಡೆಸಿದ ಅರುಣ್ ಸೆರಾವೊ ನೇತೃತ್ವದ ಬ್ಲೂ ಬ್ರಾಸ್ ಬ್ಯಾಂಡ್  ತಂಡಕ್ಕೆ ಅವರು ತಮ್ಮ ವತಿಯಿಂದ ರೂ 2 ಲಕ್ಷ ದ ಬಹುಮಾನವನ್ನು ವೇದಿಕೆಯಿಂದಲೇ ಘೋಷಿಸಿದರು.

ಸ್ಥಳೀಯ ಧರ್ಮಗುರು ವಂ. ಸ್ಟೀಫನ್ ಲುವಿಸ್,  ಕೆಲರಾಯ್ ಚರ್ಚ್ ಧರ್ಮಗುರು ವಂ. ಸಿಲ್ವೆಸ್ಟರ್ ಡಿಕೊಸ್ಟಾ, ಸಾಮಾಜಿಕ ಕಾರ್ಯಕರ್ತ ಯುಟಿ ಇಫ್ತಿಕಾರ್ ಫರೀದ್, ದೈಜಿವರ್ಲ್ಡ್ ಸಂಸ್ಥಾಪಕ ವಾಲ್ಟರ್ ನಂದಳಿಕೆ,  ದೈಜಿವರ್ಲ್ಡ್ ನಿರ್ದೇಶಕ ಅಲೆಕ್ಸಿಸ್ ಕ್ಯಾಸ್ಟಲಿನೊ ಇವರು ಅತಿಥಿಗಳಾಗಿ ಭಾಗವಹಿಸಿ ʻಪೆಪೆರೆ ಪೆಪೆ ಢುಂʼ ತಂಡದ ಪ್ರಯತ್ನವನ್ನು ಮೆಚ್ಚಿ ಅಭಿನಂದಿಸಿದರು.

ಬ್ರಾಸ್ ಬ್ಯಾಂಡ್ ಜನಪ್ರಿಯತೆ ಮಸ್ಕತ್ ನಲ್ಲಿ ಹೆಚ್ಚಿಸುವ ಹಾಗೂ ಮಕ್ಕಳು ಹಾಗೂ ಯುವಜನರು ಬ್ರಾಸ್ ಬ್ಯಾಂಡ್ ಕಲೆಯನ್ನು ಕಲಿಯಲು ಅನುಕೂಲವಾಗುವಂತೆ ಹೊಸ ಬ್ಯಾಂಡ್ ಸೆಟ್ಟನ್ನು ಆಮಿ ಆನಿ ಆಮ್ಚಿಂ’ ಸಂಘಟನೆಯ ವತಿಯಿಂದ ಕೊಡುಗೆಯಾಗಿ ನೀಡುವುದಾಗಿ ಅದ್ಯಕ್ಷರಾದ ಡೆನಿಸ್ ಡಿಸಿಲ್ವ ಇವರು ಘೋಷಣೆ ಮಾಡಿದರು. ಈ ಹೆಜ್ಜೆ  ಬ್ರಾಸ್ ಬ್ಯಾಂಡ್ ಪರಂಪರೆಯನ್ನು ಮುಂದಿನ ತಲೆಮಾರಿಗೆ ಪಾವತಿಸಲು ಒಂದು ಪರಿಣಾಮಕಾರಿ ಪ್ರಯತ್ನವೆಂದು ಹಲವರು ಪ್ರಶಂಸಿಸಿದರು.

ಈ ಕಾರ್ಯಕ್ರಮದ ನಿರ್ವಹಣೆಯನ್ನು ಸಂತೋಷ್ ಡಿಕೊಸ್ತಾ, ರೀನ ಕ್ಯಾಸ್ಟಲಿನೊ, ಹಾಗೂ ಅರುಣ್ ಡಿಸೋಜಾ ಸಮರ್ಥವಾಗಿ ಕೈಗೊಂಡಿದ್ದರು.  ಮನು ಬಂಟ್ವಳ್, ಲೊಯ್ಡ್ ರೇಗೊ ಹಾಗೂ ರೋಶನ್ ರಾಡ್ರಿಗಸ್ ತೀರ್ಪುದಾರರಾಗಿದ್ದು  ʻಪೆಪೆರೆ ಪೆಪೆ ಢುಂ’ – Season 2ʼ  ಕಾರ್ಯಕ್ರಮವನ್ನು  MCCP ಮಸ್ಕತ್ ಅಧ್ಯಕ್ಷ ಲ್ಯಾನ್ಸಿ ಲೋಬೊ, ‘ಆಮಿ ಆನಿ ಆಮ್ಚಿಂ’ ಅಧ್ಯಕ್ಷ ಡೆನಿಸ್ ಡಿಸಿಲ್ವ, ಹಾಗೂ ವೆಂಚರ್ ಎಂಟರ್‌ಟೇನ್ಮೆಂಟ್ ತಂಡದ ನೇತೃತ್ವದಲ್ಲಿ ಆಯೋಜಿಸಲಾಯಿತು.  ವೇದಿಕೆಯಲ್ಲಿ  ಮಸ್ಕತ್ ಗೆ ಪ್ರಯಾಣಿಸಿದ ಎಲ್ಲಾ ಆಮಿ ಆನಿ ಆಮ್ಚಿಂ ಸದಸ್ಯರನ್ನು ಹಾಗೂ ಬ್ರಾಸ್ ಬ್ಯಾಂಡ್ ಕಲಾವಿದರನ್ನು ಸನ್ಮಾನಿಸಲಾಯಿತು.

‘ಆಮಿ ಆನಿ ಆಮ್ಚಿಂ’ ತಂಡದಿಂದ ರೋಶನ್ ಕ್ಯಾಸ್ಟಲಿನೊ, ರಾಜೇಶ್ ಡಿಕೊಸ್ತಾ,  ಜಾರ್ಜ್ ಲಿಗೋರಿ ಹಾಗೂ ಮೆಲ್ವಿನ್ ಡೆಸಾ ಇವರು ಕಾರ್ಯಕ್ರಮ ಸುಸೂತ್ರವಾಗಿ ನಡೆಸಲು ಸಹಕಾರ ನೀಡಿದರು.  ಎಮ್ ಸಿಸಿಪಿ ತಂಡದಿಂದ ಉಪಾಧ್ಯಕ್ಷರಾದ  ಎಡಾಲ್ಫ್ ಡಿಸೋಜಾ ಮತ್ತು ಅಜಿತ್ ಡಿಕೊಸ್ತಾ, ಕಾರ್ಯದರ್ಶಿ ಸಿಲ್ವಿಯಾ ಡಾಯಸ್,  ಲೆಕ್ಕ ಪರಿಶೋಧಕ ಶ್ರೀಕಾಂತ್ ಕುವೆಲ್ಲೊ, ಸಾಂಸ್ಕೃತಿಕ  ಕಾರ್ಯದರ್ಶಿ ಪೀಟರ್ ಫೆರ್ನಾಂಡಿಸ್,  ಕ್ರೀಡಾ ಕಾರ್ಯದರ್ಶಿ ಪ್ರಿನಿಟ ಮೊಂತೆರೊ,  ಸಮುದಾಯ ಸೇವಾ ಕಾರ್ಯದರ್ಶಿ ವಿವೆಟ್ ಲಸ್ರಾದೊ ಮತ್ತು ಆಧ್ಯಾತ್ಮಿಕ ಸೇವಾ ಕಾರ್ಯದರ್ಶಿ ಎಲಿಜಬೆತ್ ನೊರೊನ್ಹ ಇವರು ಈ ಕಾರ್ಯಕ್ರಮದ ಯಶಸ್ವಿಗೆ ಹಗಲಿರುಳು ಶ್ರಮಿಸಿದರು.

ಮಂಗಳೂರಿನಿಂದ ಆರಂಭವಾದ  ಆಮಿ ಆನಿ ಆಮ್ಚಿಂ ತಂಡದ ʻಪೆಪೆರೆ ಪೆಪೆ ಢುಂʼ ಕಾರ್ಯಕ್ರಮ ಈಗ ಅಂತಾರಾಷ್ಟ್ರೀಯ ವೇದಿಕೆಗೆ ತಲುಪಿದೆ. ಮಂಗಳೂರಿನ ಬ್ರಾಸ್ ಬ್ಯಾಂಡ್‌ ಕಲೆಗೆ ಹೊಸ ಪ್ರಯೋಗವಾಗಿ ಆಧುನಿಕ  ವಾದ್ಯಗಳಾದ ಕೀ ಬೋರ್ಡ್, ಬೇಸ್ ಗಿಟಾರ್ ಮತ್ತು ಡ್ರಮ್ ಗಳನ್ಮು ಸೇರಿಸಿದ್ದು ಇದರಿಂದ ಸೃಷ್ಟಿಯಾದ ನೂತನ ಸಂಗೀತ ಶೈಲಿ ಪ್ರೇಕ್ಷಕರ ಮನ ಸೂರೆ ಗೊಂಡಿತು.  ಅಲ್ಲದೆ ಹೊಸ ಮೆರುಗು ನೀಡಿತು.  ಉದ್ಯಮಿ ದಿನೇಶ್ ಕೊರೆಯ ನೇತೃತ್ವದ   ಸ್ಕೈ ಯುನೈಟೆಡ್ ಲಾಜಿಸ್ಟಿಕ್ಸ್‌ ಸಂಸ್ಥೆ ಪ್ರಧಾನ ಪೋಷಕರಾಗಿದ್ದೂ ವೆಂಚರ್ ಎಂಟರ್ ಟೇಯ್ನ್ಮೆಂಟ್ ಸಂಸ್ಥೆಯ ತಂಡ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿತು.

ಮಂಗಳೂರಿನಲ್ಲಿ ಪ್ರಾರಂಭವಾದ ‘ಪೆಪೆರೆ ಪೆಪೆ ಢುಂ’ ಈಗ ಅಂತರಾಷ್ಟ್ರೀಯ ವೇದಿಕೆಯಲ್ಲಿ ಹೆಜ್ಜೆ ಇಟ್ಟು, ಕೊಂಕಣಿ ಬ್ರಾಸ್ ಬ್ಯಾಂಡ್ ಪರಂಪರೆಯಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸಿದೆ. ಆಯೋಜಕರು ಮುಂದಿನ ಸೀಸನ್ 3 ಅನ್ನು 2026ರ ಏಪ್ರಿಲ್ 17ರಂದು ದೋಹಾ ಖತಾರ್‌ನಲ್ಲಿ ಆಯೋಜಿಸುವುದಾಗಿ ಘೋಷಿಸಿದರು. ದೋಹಾ ಖತಾರ್ ನ ‘ಮ್ಯಾಂಗಲೋರ್ ಕ್ರಿಕೆಟ್  ಕ್ಲಬ್’ (MCC) ಇದರ ಸ್ಥಾಪಕ ಜೆರಾಲ್ಡ್ ಡಿಮೆಲ್ಲೊ  ಹಾಗೂ ಅಧ್ಯಕ್ಷರಾದ  ಕ್ರಿಸ್ಟಿನ್ ಡೆನ್ಜಿಲ್ ಲೋಬೊ ಇವರ ಪರವಾಗಿ ದೋಹಾದಿಂದ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಉದ್ಯಮಿ ಅಲೆಕ್ಸಿಸ್ ಕ್ಯಾಸ್ಟಲಿನೊ ಹಾಗೂ ಎಮ್ಸಿಸಿ ಖತಾರ್ ಇದರ ಸಾಂಸ್ಕ್ರತಿಕ ಸಲಹೆಗಾರರಾದ  ರೀನಾ ಕ್ಯಾಸ್ತಲಿನೊ ಇವರಿಗೆ ಎಮ್ ಸಿಸಿಪಿ ಅಧ್ಯಕ್ಷರಾದ  ಲ್ಯಾನ್ಸಿ ಲೋಬೊ ಇವರು ಮುಂದಾಳತ್ವದ ಟಾರ್ಚ್ ನೀಡುವುದರ ಮೂಲಕ  ಜವಾಬ್ದಾರಿಯನ್ನು ಹಸ್ತಾಂತರಿಸಿದರು.

ಎಮ್ ಸಿಸಿಪಿ ಅಧ್ಯಕ್ಷ ಲ್ಯಾನ್ಸಿ ಲೋಬೊ ಸ್ವಾಗತಿಸಿದರು.  ಆಮಿ ಆನಿ ಆಮ್ಚಿಂ ಅಧ್ಯಕ್ಷರಾದ ಡೆನಿಸ್ ಡಿಸಿಲ್ವಾ ಹಾಗೂ ಪ್ರಿನಿಟ ಮೊಂತೆರೊ ಇವರು ವಂದನಾರ್ಪಣೆಗೈದರು.