ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯ ವಿವೇಕಾನಂದ ರಾಕ್ ಮೆಮೋರಿಯಲ್ನಲ್ಲಿ ಧ್ಯಾನ ನಡೆಸಿದ್ದಾರೆ. ಸುಮಾರು 45 ಗಂಟೆಗಳ ಕಾಲ ಕನ್ಯಾಕುಮಾರಿ ಯಾತ್ರೆ ಕೈಗೊಂಡಿರುವ ಮೋದಿ ಧ್ಯಾನದಲ್ಲಿ ಕಾಲ ಕಳೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಧ್ಯಾನದ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಚುನಾವಣಾ ಫಲಿತಾಂಶಕ್ಕೂ ಮುನ್ನ ಈ ವಿಡಿಯೋ ಪ್ರಸಾರಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಮೋದಿ ಅವರ ಧ್ಯಾನಕ್ಕೆ ನಟ ಪ್ರಕಾಶ್ ರಾಜ್ ಅವರು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾನಲ್ಲಿ ನಟ ಪ್ರಕಾಶ್ ರಾಜ್ ಅವರು ಈ ಬಾರಿ ಮೋದಿ ಅವರ ಧ್ಯಾನಕ್ಕೆ ಕಿಡಿಕಾರಿದ್ದಾರೆ. ಇದೊಂದು ನೌಟಂಕಿ ಎಂದು ಟ್ವೀಟ್ ಮಾಡಿರುವ ಪ್ರಕಾಶ್ ರಾಜ್, ಇದು ಧ್ಯಾನವೋ ಅಥವಾ ಮೀಡಿಯಾದ ಗಮನವನ್ನು ಸೆಳೆಯುವ ತಂತ್ರವೋ ಎಂದು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಲೋಕಸಭಾ ಚುನಾವಣೆಗೆ ಕೊನೆಯ ಹಂತದ ಮತದಾನ ನಡೆಯುತ್ತಿದೆ. ನಾನು ದ್ವೇಷಿಸಿರುವವರ ವಿರುದ್ಧ ಪಟ್ಟು ಬಿಡದೇ ಹೋರಾಡಿದ್ದೇನೆ. ನನ್ನಂತೆ ನನ್ನ ದೇಶ ಕೂಡ ದ್ವೇಷದ ವಿರುದ್ಧ ಮತ ಹಾಕಿದೆ ಎನ್ನುವುದು ನನ್ನ ನಂಬಿಕೆಯಾಗಿದೆ. ಜೂನ್ 4ರ ಚುನಾವಣಾ ಫಲಿತಾಂಶವನ್ನು ಎದುರು ನೋಡುತ್ತಿದ್ದೇನೆ. ನೋಡಿ ಇವರೇ ಕೊನೇ ಚಕ್ರವರ್ತಿ ಎನ್ನುವ ಪೋಸ್ಟ್ ಮಾಡಿದ್ದಾರೆ.

