ಮೈಸೂರು: ಪ್ರಕಾಶ್ ರೈ ಅಭಿನಯದ ಮೀಡಿಯಾ ಹೌಸ್ ಬ್ಯಾನರ್ ಅಡಿಯಲ್ಲಿ, ನಿರ್ದೇಶಕ ಬಿ.ಸುರೇಶ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ದೇವರ ನಾಡಲ್ಲಿ’ ಚಿತ್ರವು ಜ.15ರ ಸಂಕ್ರಾತಿಯಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ನಟ ಮಂಡ್ಯ ರಮೇಶ್ ತಿಳಿಸಿದರು.
ಈ ಚಿತ್ರವೂ ಜ.15ರ ಸಂಕ್ರಾತಿಯಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದ್ದು, ರಂಗಭೂಮಿ ಹಿನ್ನೆಲೆಯುಳ್ಳ ಪ್ರಕಾಶ್ ರೈ, ದಿಶಾ ರಮೇಶ್, ಅಚ್ಯುತ್, ಪ್ರಣವ್, ಮನುಹೆಗಡೆ, ಸಿಹಿಕಹಿ ಚಂದ್ರು, ಅರವಿಂದ ಸೇರಿದಂತೆ ಇನ್ನಿತರ ಹೊಸ ಹಾಗೂ ಹಿರಿಯ ಮುಖಗಳು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟ್ಟಿಸಿದ್ದಾರೆ ಎಂದು ತಿಳಿಸಿದರು.
ನಂತರ ಚಿತ್ರ ನಿರ್ಮಾಪಕಿ ಶೈಲಜಾ ನಾಗ್ ಮಾತನಾಡಿ, ಇಂದಿನ ದಿನಗಳಲ್ಲಿ ಕನ್ನಡ ಚಿತ್ರಗಳಿಗೆ ಚಿತ್ರ ಮಂದಿರ ದೊರೆಯುವುದೇ ದೊಡ್ಡ ಸವಾಲು. ದೊಡ್ಡ ಸ್ಟಾರ್ ಗಳ ಚಿತ್ರ, ರೀಮೆಕ್, ವ್ಯಾಪಾರಿಕರಣದ ಚಿತ್ರ, ಪರಭಾಷಾ ಚಿತ್ರಗಳ ಹಾವಳಿಯನ್ನು ಎದುರಿಸಿ, ಶ್ರೀನಿವಾಸ್ ತೂಗುದೀಪ್ ಪ್ರೊಡೆಕ್ಷನ್ ಅವರ ಬೆಂಬಲದೊಂದಿಗೆ ಬಾಂಬೆ, ಮದ್ರಾಸ್, ದೆಹಲಿ, ವಿದೇಶಗಳಲ್ಲಿ ಸೇರಿದಂತೆ ಮೈಸೂರಿನ 2ಮಲ್ಟಿಪ್ಲೆಕ್ಸ್ಗಳೊಂದಿಗೆ ರಾಜ್ಯದ 100ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ ಎಂದರು.
1 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗಿರುವ ಈ ಚಿತ್ರದಲ್ಲಿ ಪ್ರತಿಯೊಬ್ಬ ಪಾತ್ರದಾರಿಯೂ ತನ್ನ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಎಲ್ಲಿಯೂ ಯಾವ ವಿಷಯದಲ್ಲಿಯೂ ರಾಜಿ ಪ್ರಶ್ನೆಯೆ ಇಲ್ಲ. ಮುಖ್ಯವಾಗಿ ರಂಗಭೂಮಿ ಹಿನ್ನೆಲೆ ಹೊಂದಿರುವವರನ್ನು ಹೊಂದಿರುವ ಈ ಚಿತ್ರದಲ್ಲಿ ನಟಿಸಿದ ಯಾರೊಬ್ಬರು ಸಂಭಾವನೆ ಪಡೆದಿಲ್ಲ. ಅದ್ವೈತಾ ಅವರ ಕ್ಯಾಮರಾ ಕೈ ಚಳಕ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಎಂದರು.
ನಿರ್ದೇಶಕ ಬಿ.ಸುರೇಶ್ ಮಾತನಾಡಿ, 1998ರಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ಸಣ್ಣ ಘಟನೆಯನ್ನು ಕಥೆಯಾಗಿ ಹೆಣೆಯಲಾಗಿದೆ. ಕಥೆ ಬರೆಯುವುದು ಅತ್ಯಂತ ದೊಡ್ಡ ಕಷ್ಟದ ಕೆಲಸವಾಗಿದ್ದು, ಈ ನನ್ನ ಕಾರ್ಯಕ್ಕೆ ನನ್ನ ಸ್ನೇಹಿತರು ಸಾಥ್ ನೀಡಿದ್ದಾರೆಂದು ಇದೇ ಸಂದರ್ಭ ಸ್ಮರಿಸಿದರು.
ಕರಾವಳಿ ಭಾಗದ ಜನರು ಮಿಶ್ರ ಭಾಷೆಗಳನ್ನಾಡುತ್ತಿರುತ್ತಾರೆ. ಕನ್ನಡವನ್ನೇ ವಿಭಿನ್ನವಾಗಿ ಉಚ್ಛರಿಸುತ್ತಿರುತ್ತಾರೆ. ಈ ರೀತಿಯ ಸುಮಾರು ಆರು ಶೈಲಿಯ ಸಂಭಾಷೆಣೆಯನ್ನು ಚಿತ್ರದಲ್ಲಿ ಕಾಣಬಹುದಾಗಿದ್ದು, ಪೂರ್ಣವಾಗಿ ಕರಾವಳಿ ಪ್ರದೇಶದಲ್ಲಿ ಚಿತ್ರಿಕರಿಸಲಾದ ಚಿತ್ರ ಇದಾಗಿದೆ. ಒಂದು ಸಣ್ಣ ಗ್ರಾಮದಲ್ಲಿ ಬಾಂಬ್ ಸ್ಫೋಟಗೊಂಡಾಗ ಅಲ್ಲಿನ ಸನ್ನಿವೇಶಗಳು, ಅದರ ಹಿಂದಿನ ರಹಸ್ಯ, ನ್ಯಾಯಾಂಗ ವ್ಯವಸ್ಥೆ ಪೂರ್ವಗ್ರಹ ಪೀಡಿತವಾದಾಗ ಜನರು ಅಂತಹ ಘಟನೆಗಳನ್ನು ನೋಡುವ ವಿಭಿನ್ನ ದೃಷ್ಟಿಕೋನವನ್ನು 3 ವಿಭಾಗಗಳಾಗಿ ಚಿತ್ರದಲ್ಲಿ ತೋರಿಸಲಾಗಿದೆ. ಈ 3 ಭಾಗಗಳನ್ನು ಮೂರು ವಿವಿಧ ಬಣ್ಣಗಳ ಮೂಲಕ ಸಿನಿ ಪ್ರೇಕ್ಷಕನ ಮುಂದಿಡಲಾಗುತ್ತಿದೆ ಎಂದು ವಿವರಿಸಿದರು.