ಧನಂಜಯ್ ಅಭಿನಯದ “ಜಯನಗರ 4ನೇ ಬ್ಲಾಕ್” ಕಿರುಚಿತ್ರವನ್ನೂ ಹಲವಾರು ಮಂದಿ ವೀಕ್ಷಿಸಿ ಲೈಕಿಸಿದ್ದೂ ಆಗಿದೆ, ಕಿರುಚಿತ್ರ ಯೂಟ್ಯೂಬಿನಲ್ಲಿ ಹಿಟ್ ಆಗಿ ಕೆಲವೊಂದು ಪ್ರಶಸ್ತಿಗಳನ್ನು ಬಾಚಿದ್ದೂ ಆಗಿದೆ. ಇದೇ ಹಿಟ್ ಕಿರುಚಿತ್ರದ ನಿರ್ದೇಶಕರಾದ ಸತ್ಯಪ್ರಕಾಶ್ ಅವರು ಈಗ “ರಾಮಾ ರಾಮಾ ರೇ” ಎಂಬ ವಿಭಿನ್ನ ಕಥಾಹಂದರವಿರುವ ಸಿನೆಮಾವನ್ನು ನಿರ್ದೇಶಿಸಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಬದುಕಿನ ದಾರಿಯಲ್ಲಿ ಎದುರಾಗುವ ಸನ್ನಿವೇಶಗಳು ಸಂದರ್ಭಕ್ಕೆ ತಕ್ಕಂತೆ ಹೇಗೆ ವಿಲನ್ ಗಳಾಗುತ್ತವೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಜೈಲಿನಿಂದ ತಪ್ಪಿಸಿಕೊಂಡು ಬದುಕಿನ ದಾರಿಯಲ್ಲಿ ಓಡುವ ಕಳ್ಳ, ಆತನನ್ನು ಕಾಸಿಗಾಗಿ ಹಿಡಿಯಲು ಬರುವ ವ್ಯಕ್ತಿ, ಇವರ ನಡುವೆ ಒಂದು ಹಗ್ಗ ಇವಿಷ್ಟು ಬದುಕಿನ ಕಹಿಸತ್ಯವನ್ನು ತೆರೆಯ ಮೇಲೆ ಬಿಂಬಿಸಲಿವೆ.
ಅಜಯ್ ರಾವ್ ಅಭಿನಯದ ಎಂದೆಂದಿಗೂ ಹಾಗೂ ಶ್ರುತಿ ಹರಿಹರನ್ ಅಭಿನಯದ ಊರ್ವಿ ಸಿನೆಮಾಗಳಿಗೆ ಸಂಭಾಷಣೆ ಬರೆದು ಲೂಸ್ ಮಾದ ಯೋಗಿ ಸಹೋದರನ ಭಾಗ್ಯರಾಜ್ ಚಿತ್ರಕ್ಕೆ ಚಿತ್ರಕಥೆ ಬರೆದ, ಮೂಲ ಕಥೆಗಾರರಾಗಿರುವ ಸತ್ಯಪ್ರಕಾಶ್ ಪನ್ನಗಭರಣ ನಿರ್ದೇಶನದ ಹ್ಯಾಪಿ ನ್ಯೂ ಇಯರ್ ಚಿತ್ರಕ್ಕೆ ಕಥೆಯನ್ನು ಒದಗಿಸಿದ್ದಾರೆ. ಭಗವದ್ಗೀತೆಯಲ್ಲಿನ ಸಾಯಿಸುವವನು ಮತ್ತು ಸಾಯುವವನು ಕತೆಯ ಸ್ಫೂರ್ತಿಯನ್ನು ಪಡೆದುಕೊಂಡು ರಾಮಾ ರಾಮಾ ರೇ ಸಿನೆಮಾವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪ್ರೀತಿ,ಹಾಸ್ಯದ ಜೊತೆಗೆ ಬದುಕನ್ನು ತೋರಿಸಲಾಗಿದೆ. ಯುವ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಸಂಗೀತ ನಿರ್ದೇಶನ, ಲವಿತ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜು ಅವರ ಸಂಕಲನ ಮತ್ತು ನಾಬಿನ್ ಪೌಲ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ತಂತ್ರಜ್ಞರೇ ಸೇರಿ ನಿರ್ಮಿಸಿದ ರಾಮಾ ರಾಮಾ ರೇ ಸಿನೆಮಾದಲ್ಲಿ ಕೆ.ಜಯರಾಂ, ನಟರಾಜ್, ಧರ್ಮಣ್ಣ ಕಡೂರು, ಎಂ.ಕೆ.ಮಠ, ಬಿಂಬಶ್ರೀ ನೀನಾಸಂ, ಶ್ರೀಧರ್ ಅಭಿನಯಿಸಿದ್ದಾರೆ. ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.