ವಾಸ್ತುಪ್ರಕಾರ ಚಿತ್ರದ ನಂತರ ಯುವಕರ ಡಾರ್ಲಿಂಗ್ ನಿರ್ದೇಶಕ ಯೋಗರಾಜ್ ಭಟ್ಟರು ದುನಿಯಾ ವಿಜಯ್ ಅವರನ್ನು ದನ ಕಾಯೋಕೆ ನೇಮಿಸಿದ್ದಾರೆ. ಸಾಹಿತ್ಯದಲ್ಲಿ ನವರಸಗಳನ್ನು ಬೆರಕೆ ಮಾಡಿ ಯುವ ಮನಸ್ಸುಗಳನ್ನು ದೋಚಿರುವ ಹಾಕಿರುವ ಭಟ್ಟರು ಈ ಬಾರಿ ದುನಿಯಾ ವಿಜಿ ಮತ್ತು ಪ್ರಿಯಾಮಣಿಯವರನ್ನು ದನಗಳ ಹಿಂಡಿನ ಜೊತೆ ಪ್ರೇಮಿಸಲು ಬಿಟ್ಟಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ನಲ್ಲಿ ವಿಜಯ್ ಅವರ ಪೆದ್ದು- ಮುದ್ದು ಮಾತುಗಳ ಜೊತೆಯಲ್ಲಿ ಸಖತ್ ಫೈಟ್ಸ್ ಗಳನ್ನು ಕೂಡ ಬಳಸಿಕೊಂಡಿದ್ದಾರೆ ಭಟ್ಟರು. ವಿಜಯ್, ಪ್ರಿಯಾಮಣಿಯವರ ಜೊತೆಯಲ್ಲಿ ರಂಗಾಯಣ ರಘು, ಬಿರಾದರ್, ಸುಚೇಂದ್ರ ಪ್ರಸಾದ್ ಅವರೂ ಅಭಿನಯಿಸಿದ್ದಾರೆ.
ದನ ಕಾಯೋನಿಗೆ ಸುಜ್ಞಾನ್ ಅವರ ಛಾಯಾಗ್ರಹಣ, ವಿ.ಹರಿಕೃಷ್ಣ ಸಂಗೀತ, ದೀಪು ಸಂಕಲನ, ರವಿವರ್ಮ-ಗಣೇಶ್ ಸಾಹಸ, ಜಯಂತ್ ಕಾಯ್ಕಿಣಿ ಮತ್ತು ಭಟ್ಟರ ಸಾಹಿತ್ಯವಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಕೇಳುಗರ ಹೃದಯಕ್ಕೆ ಕಚಗುಳಿಯಿಟ್ಟರೆ, ಚಿತ್ರದ ಟ್ರೇಲರ್ ಯೂಟ್ಯೂಬ್ ನಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಕುತೂಹಲದಲ್ಲಿ ಬೆಂದು ಹೋಗಿರುವ ಪ್ರೇಕ್ಷಕ “ಗಿಡ-ಮರ-ಬಳ್ಳಿ ಹೂ ಬಿಟ್ಟಾಯ್ತು, “ದನ ಕಾಯೋನು” ಯಾವಾಗ ಎಂದು ಕೇಳುತ್ತಿದ್ದಾನೆ.