ಮೈಸೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿ ಬಳಗದ ವತಿಯಿಂದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಲಕ್ಷ್ಮಿ ಚಿತ್ರ ಮಂದಿರ ಮುಂಭಾಗ ಗೋಕಾಕ್ ನೆನಪು ಕಾರ್ಯಕ್ರಮ ನಡೆಸಲಾಯಿತು.
ಇದೇ ವೇಳೆ ಇಂದು ಬಿಡುಗಡೆಯಾದ ಗೀತಾ ಚಲನಚಿತ್ರವು ಗೋಕಾಕ್ ಹೋರಾಟದ ಆಧಾರಿತ ಚಿತ್ರವಾಗಿದ್ದು, ಹಾಗಾಗಿ ಕನ್ನಡ ಹೋರಾಟಗಾರರಿಗೂ ಹಾಗೂ ಕನ್ನಡ ಪರ ಸಂಘಟನೆಗಳಿಗೂ ಸಂತೋಷಕರ ವಿಚಾರವಾಗಿದ್ದು ಶತದಿನೋತ್ಸವ ಆಚರಿಸಲಿ ಎಂದು ಅಭಿಮಾನಿಗಳು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪ್ರೇಕ್ಷಕರಿಗೆ ಗೋಕಾಕ್ ಚಳುವಳಿಯ ಹೋರಾಟದ ಮಾಹಿತಿಯ ಕರಪತ್ರವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ವೈ.ಡಿ.ರಾಜಣ್ಣ ಮಾತನಾಡಿ ಭಾಷಾ ನೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ 1980ರ ದಶಕದಲ್ಲಿ ನಡೆದ ಒಂದು ಚಳುವಳಿಯೇ ಗೋಕಾಕ್ ಚಳುವಳಿಯಾಗಿದೆ. ತ್ರಿಭಾಷಾ ಸೂತ್ರದಡಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯನ್ನಾಗಿ ಪರಿಗಣಿಸಬೇಕು ಎನ್ನವಂತಹ ಹಲವಾರು ಬೇಡಿಕೆಗಳನ್ನೊಳಗೊಂಡ ವರದಿಯೊಂದನ್ನು ಕನ್ನಡದ ಕವಿ ವಿ.ಕೃ ಗೋಕಾಕರು ಸಿದ್ಧಪಡಿಸಿ ಸಲ್ಲಿಸಿದ್ದರು, ಆದ ಕಾರಣ ಚಳುವಳಿಗೆ ಅವರದೇ ಹೆಸರು ಬಂದಿದೆ ಎಂದು ಹೇಳಿದರು.
ಈ ವೇಳೆ ಡಾ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ರಾಮೇಗೌಡ್ರು, ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮಾಜಿ ನಗರಪಾಲಿಕೆ ಸದಸ್ಯರಾದ ಎಂಡಿ ಪಾರ್ಥಸಾರಥಿ, ಬಿಜೆಪಿ ಯುವ ಮುಖಂಡ ರಂಗನಾಥ್, ಗೋಲ್ಡನ್ ಸ್ಟಾರ್ ಗಣೇಶ್, ಅಭಿಮಾನಿ ಬಳಗದ ಅಧ್ಯಕ್ಷ ಪ್ರಣವ್ ಸಿಂಹ, ಸುಚೀಂದ್ರ, ಅಜಯ್, ಮಹೇಶ್, ಸಂತೋಷ ಹಾಗೂ ನೂರಾರು ಅಭಿಮಾನಿಗಳು ಹಾಗೂ ಕನ್ನಡ ಪರ ಸಂಘಟನೆ ಹೋರಾಟಗಾರರು ಇದ್ದರು.