ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಛೇರಿ, ನರ್ಸಿಂಗ್ ಫೌಂಡೇಶನ್ ವಿಭಾಗ, ಯೇನೆಪೋಯ ನರ್ಸಿಂಗ್ ಕಾಲೇಜು ದೇರಳಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಕ್ಷಯರೋಗ ದಿನವನ್ನು ಮಾ.24 ರಂದು ಯೇನೆಪೋಯ ವಿಶ್ವವಿದ್ಯಾಲಯದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮವು ಜಾಥಾದ ಮುಖಾಂತರ ಪ್ರಾರಂಭವಾಯಿತು.

ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೇನೆಪೋಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ. ವಿಜಯಕುಮಾರ್ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಹೆಚ್ ಆರ್ ತಿಮ್ಮಯ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ದಕ್ಷಿಣ ಕನ್ನಡ ಇವರು ಕ್ಷಯರೋಗ ಕೊನೆಗಾಣಿಸಲು ಕಾರ್ಯನಿರ್ವಹಿಸುವ ಎಲ್ಲರನ್ನೂ ಪ್ರಶಂಶಿಸಿದರು.

ಮುಖ್ಯ ಅತಿಥಿಗಳಾಗಿ ಯೇನೆಪೋಯ ವಿಶ್ವವಿದ್ಯಾಲಯದ ಕುಲಸಚಿವರು ಡಾ. ಕೆ ಎಸ್ ಗಂಗಾಧರ ಸೋಮಯಾಜಿ ಹಾಗೂ ಯೇನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀನಾ ಕೆಸಿ, ನರ್ಸಿಂಗ್ ಫೌಂಡೇಶನ್ ವಿಭಾಗದ ಮುಖ್ಯಸ್ಥರಾದ ಪ್ರೊ. ಶಶಿಕುಮಾರ್ ಜವಡಗಿ ಮತ್ತು ಸಹಪ್ರಾಧ್ಯಾಪಕರು ಡಾ. ಹೆಝಿಲ್ ರೀಮ ಬರ್ಬೋಜ ಇವರು ಉಪಸ್ಥಿತರಿದ್ದರು. ಜಿಲ್ಲಾಎಲ್ಲಾ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಸ. ಆರೋಗ್ಯ ಕೇಂದ್ರ ಮತ್ತು ಪ್ರಾ. ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕ್ಷಯಮುಕ್ತ ಗ್ರಾಮ ಪಂಚಾಯತಿಗಳಿಗೆ ಪ್ರಶಸ್ತಿಪತ್ರ ಹಾಗು ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ಪೊಟ್ಟಣವನ್ನು ನೀಡಿದವರಿಗೆ ಪ್ರಶಂಸನಾ ಪತ್ರ ವಿತರಣೆ ಮಾಡಲಾಯಿತು. ಕ್ಷಯರೋಗದ ಜಾಗೃತಿಗೆ ಸಂಬಂದಪಟ್ಟಂತೆ ಮೈಮ್ ಶೋ, ಕಿರುನಾಟಕ ಮತ್ತು ನೃತ್ಯದ ಮೂಲಕ ಯೇನೆಪೋಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಸುಮಾರು 300 ಜನರು ಭಾಗಿಯಾಗಿದ್ದರು.

ಕಾರ್ಯಕ್ರಮದ ಮುಖ್ಯ ಆಯೋಜಕರಾದ ಡಾ. ಖತೀಜ ದಿಲ್ಶಾದ್ ಎಮ್ ಪಿ, ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿಗಳು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು, ಶ್ರೀಮತಿ ಜ್ಯೋತಿ ಕೆ ಉಳೆಪಾಡಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ವಂದಿಸಿದರು ಹಾಗೂ ಶ್ರೀಮತಿ ಪವಿತ್ರ, ಸಹಾಯಕ ಪ್ರಾಧ್ಯಾಪಕರು, ಯೇನೆಪೋಯ ನರ್ಸಿಂಗ್ ಕಾಲೇಜು ನಿರೂಪಿಸಿದರು.