ನಿಟ್ಟೆ: “ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಹೇಗೆ ಬಾಚಿಕೊಳ್ಳಬೇಕು ಎಂಬುದನ್ನು ವಿದ್ಯಾರ್ಥಿಗಳು ಅಭ್ಯಸಿಸಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ, ವಿದ್ಯಾಲಯಕ್ಕೆ ಹಾಗೂ ವಿವಿಧ ಕಂಪೆನಿಗಳಿಗೆ ಪ್ರಯೋಜನಕಾರಿ ಯೋಜನೆಯನ್ನು ರೂಪಿಸುವ ಚಿಂತನೆಯನ್ನು ನಡೆಸಲಾಗುತ್ತಿದೆ” ಎಂದು ಥಾಟ್ ಗ್ರೈನ್ಸ್ ಸೊಲ್ಯೂಶನ್ಸ್ ಉಡುಪಿ ಸಂಸ್ಥೆಯ ಸಹಸ್ಥಾಪಕ ಹಾಗೂ ಸಿಇಒ ಶ್ರೀ ಅರುಣಾಚಲ ಶೆಟ್ಟಿ ತಿಳಿಸಿದರು.

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ವಿಭಾಗವು ಉಡುಪಿಯ ಥಾಟ್ ಗ್ರೈನ್ಸ್ ಸೊಲ್ಯೂಶನ್ಸ್ ಸಹಯೋಗದಲ್ಲಿ ಮಾರ್ಚ್ 7, 2025ರಂದು ಆಯೋಜಿಸಲಾದ ಇಂಟರ್ಕಾಲೇಜಿಯಟ್ ಟೆಕ್ನಿಕಲ್ ಸ್ಪರ್ಧಾ ಕಾರ್ಯಕ್ರಮ ‘ಟೆಕ್-ನೋ’೨೫’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. “ವಿದ್ಯಾರ್ಥಿಗಳು ಪಠ್ಯಕ್ರಮದಾಚೆಗೆ ಚಿಂತನೆ ಮಾಡುವುದು ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ ಹೊಂದಿಕೆಯಾಗುವ ನವೀನ ದಾರಿ ಹುಡುಕುವುದು ಮಹತ್ವದ ವಿಷಯ” ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲುಂಕರ್ ಅವರು, ಮಹಾವಿದ್ಯಾಲಯವು ವಿದ್ಯಾರ್ಥಿಗಳ ತಾಂತ್ರಿಕ ಪ್ರಗತಿಗಾಗಿ ನೀಡುತ್ತಿರುವ ಅನೇಕ ಅವಕಾಶಗಳ ಬಗ್ಗೆ ವಿವರಿಸಿದರು.

ಎಂ.ಸಿ.ಎ ವಿಭಾಗದ ಮುಖ್ಯಸ್ಥೆ ಡಾ. ಮಮತಾ ಬಾಲಿಪ ಅವರು ಸ್ವಾಗತಿಸಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಸಂಯೋಜಕಿ ಡಾ. ಸ್ಪೂರ್ತಿ ಬಿ. ಶೆಟ್ಟಿ ಅತಿಥಿಯನ್ನು ಪರಿಚಯಿಸಿದರು. ಇನ್ನೋರ್ವ ಸಂಯೋಜಕಿ ಡಾ. ಮಂಗಳಾ ಶೆಟ್ಟಿ ವಂದಿಸಿದರು.
ಉದ್ಘಾಟನೆಯ ನಂತರ, ವಿವಿಧ ಕಾಲೇಜುಗಳಿಂದ ಆಗಮಿಸಿದ ಬಿ.ಸಿ.ಎ, ಬಿ.ಎಸ್ಸಿ, ಬಿಬಿಎ ಹಾಗೂ ಬಿಕಾಂ ವಿದ್ಯಾರ್ಥಿಗಳಿಗೆ ವಿವಿಧ ತಾಂತ್ರಿಕ ಸ್ಪರ್ಧೆಗಳು ನಡೆದವು.

