ಮಂಗಳೂರು: ಹಳೆಯಂಗಡಿ ಸರ್ಕಾರಿ ಕಾಲೇಜಿನ ಬಿಬಿಎ ಅಂತಿಮ ವರ್ಷದ ಕೆಲವು ವಿದ್ಯಾರ್ಥಿ-ವಿದ್ಯಾರ್ಥಿನಿಗಳು ತಮ್ಮ ಸಮವಸ್ತ್ರವನ್ನು ಹರಿದು ಚೂರುಚೂರು ಮಾಡಿರುವುದು, ಸಮವಸ್ತ್ರದ ಮೇಲೆ ಮಾರ್ಕರ್ನಿಂದ ಸಹಿ ಹಾಕಿರುವುದು ಹಾಗೂ ಪರಸ್ಪರರ ಸಮವಸ್ತ್ರದ ಮೇಲೂ ಸಹಿ ಹಾಕಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.
ಈ ಬಗ್ಗೆ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮವಸ್ತ್ರವು ಕೇವಲ ಒಂದು ಬಟ್ಟೆಯಲ್ಲ; ಅದು ನಮ್ಮ ಶಾಲೆ-ಕಾಲೇಜಿನ ಶಿಸ್ತು, ಗೌರವ ಮತ್ತು ಗುರುತಿನ ಪ್ರತೀಕ. ಅದನ್ನು ಈ ರೀತಿ ಅವಮಾನಿಸುವುದು ಶಿಕ್ಷಣ ಸಂಸ್ಥೆಯ ಘನತೆಗೆ ಧಕ್ಕೆ ತರುವ ಕೃತ್ಯ. ಹಿರಿಯ ವಿದ್ಯಾರ್ಥಿಗಳು ಹೀಗೆ ವರ್ತಿಸಿದರೆ, ಕಿರಿಯ ವಿದ್ಯಾರ್ಥಿಗಳು ಅದನ್ನೇ ಅನುಸರಿಸುವ ಸಾಧ್ಯತೆ ಇದೆ. ಇಂತಹ ಜವಾಬ್ದಾರಿಯಿಲ್ಲದ ನಡೆಗೆ ಕಾರಣರಾದವರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು.
ಈ ಘಟನೆ ಕುರಿತು ಕಾಲೇಜು ಆಡಳಿತ ಹಾಗೂ ಸಂಬಂಧಪಟ್ಟ ಶಿಕ್ಷಕರು ಸೂಕ್ತ ಕ್ರಮ ಕೈಗೊಂಡು, ಇಂತಹ ಘಟನೆಗಳು ಮತ್ತೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ ಪದವಿ ಪಡೆಯುವುದಕ್ಕಿಂತ ಮೊದಲು ಸಂಸ್ಕಾರವನ್ನು ಕಲಿಯಿರಿ. ಶಿಕ್ಷಣ ಸಂಸ್ಥೆಯ ಗೌರವ ಉಳಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ ಎಂದು ಪ್ರತಿಕ್ರಿಯಿಸಿದ್ದಾರೆ.

