ಮಂಗಳೂರು: ದಾವಣಗೆರೆಯ ಕಾಂಪೋಸಿಟ್ ರೀಜನಲ್ ಸೆಂಟರ್ ವತಿಯಿಂದ ‘NIEPID ದಿಶಾ ಪಠ್ಯಕ್ರಮ’ ಕುರಿತ ಮೂರು ದಿನಗಳ ಆರ್ಸಿಐ ಸಿಆರ್ಇ ತರಬೇತಿ ಕಾರ್ಯಕ್ರಮ ಮಂಗಳೂರಿನ ಸಾನಿಧ್ಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನಲ್ಲಿ ಆರಂಭಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಎಂ.ಎಸ್., ವಿಶೇಷಚೇತನ ಮಕ್ಕಳ ಕೌಶಲ್ಯಾಭಿವೃದ್ಧಿಯಲ್ಲಿ ವಿಶೇಷ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ತರಬೇತಿಯ ಪ್ರಯೋಜನ ಪಡೆದು ಮಕ್ಕಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವಂತೆ ಕರೆ ನೀಡಿದರು.
ಕೋರ್ಸ್ ಸಂಯೋಜಕ ರಾಜು ತಲತೋಟಿ ಮಾತನಾಡಿ, ದಿಶಾ ಪಠ್ಯಕ್ರಮವು ವಿಶೇಷಚೇತನ ಮಕ್ಕಳ ಶಿಕ್ಷಣದಲ್ಲಿ ಏಕರೂಪತೆ ತರಲು ರೂಪಿಸಲಾದ ಸಮಗ್ರ ಪಠ್ಯಕ್ರಮವಾಗಿದೆ. ತರಬೇತಿಯಲ್ಲಿ ಪಠ್ಯಕ್ರಮದ ಅನುಷ್ಠಾನ, ಬೋಧನಾ ವಿಧಾನ ಹಾಗೂ ಮೌಲ್ಯಮಾಪನ ಕುರಿತು ಪ್ರಾಯೋಗಿಕ ಜ್ಞಾನ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಿಕಂದರಾಬಾದ್ನ NIEPID ಹಿರಿಯ ವಿಶೇಷ ಶಿಕ್ಷಣ ತಜ್ಞ ಪುಷ್ಪವಿಂದರ್ ಸಿಂಗ್ ಸೈನಿ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದರು. ಡಾ. ವಸಂತ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸೋಫಿಯಾ ಡಿಸೋಜ ಧನ್ಯವಾದ ಸಮರ್ಪಿಸಿದರು. ಸುಮಾ ಡಿಸಿಲ್ವಾ ನಿರೂಪಿಸಿದರು.

