ಉಜಿರೆ: ಶಿಕ್ಷಣ ತಜ್ಞರಾಗಿ ಶಿಕ್ಷಣ ವ್ಯವಸ್ಥೆಯನ್ನು ಉತ್ಕೃಷ್ಟಗೊಳಿಸುವಲ್ಲಿ ಅಪಾರ ಕೊಡುಗೆ ನೀಡಿದ ಶಿಕ್ಷಣ ತಜ್ಞ ಎಂದೇ ಖ್ಯಾತರಾದ ಪ್ರೊ. ಎಸ್. ಪ್ರಭಾಕರ್ ಇವರ ನಿಧನ ಅತೀವ ದುಃಖ ತಂದಿದೆ.

ಪ್ರೊ. ಎಸ್. ಪ್ರಭಾಕರ್ ಅವರು ಬೆಂಗಳೂರಿನಲ್ಲಿ ಐದು ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸರಕಾರಿ ಕೆಲಸ ತೊರೆದು ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜು ಸ್ಥಾಪಕ ಪ್ರಾಂಶುಪಾಲರಾಗಿ ( 1966 ರಿಂದ 1993)ವರೆಗೆ ಸೇವೆ ಸಲ್ಲಿಸಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ಕೃಷ್ಠ ಶಿಕ್ಷಣ ದೊರೆಯಬೇಕು ಎಂದು ಗ್ರಾಮೀಣ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸಿದವರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನಲ್ ಟ್ರಸ್ಟ್‌ನ ಕಾರ್ಯದರ್ಶಿಗಳಾಗಿ, ಉಪಾಧ್ಯಕ್ಷರಾಗಿ, ಮೈಸೂರು ಹಾಗೂ ಮಂಗಳೂರು ವಿಶ್ವ ವಿದ್ಯಾನಿಲಯದ ವಿವಿಧ ಸಮಿತಿಗಳ ಸದಸ್ಯ ಮತ್ತು ಅಧ್ಯಕ್ಷರಾಗಿ ಸಂಸ್ಥೆಯ, ಸಮಿತಿಯ ಏಳ್ಗೆಗಾಗಿ ತಮ್ಮ ಅನುಭವಗಳನ್ನು ಧಾರೆ ಎರೆದವರು.

ಸಾಹಿತಿಯಾಗಿ 3 ಕೃತಿಗಳನ್ನು ರಚಿಸಿದ್ದು, 18 ಗ್ರಂಥಗಳುನ್ನು ಸಂಪಾದಿಸಿದ್ದಾರೆ. 40 ವರ್ಷಗಳ ಕಾಲ ಶ್ರೀ ಕ್ಷೇತ್ರ ಧರ್ಮಸ್ಥಳದ ಮಾಸಪತ್ರಿಕೆಯ ಮಂಜುವಾಣಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮಂಗಳೂರು ಹಾಗೂ ವಿವಿಧ ಆಕಾಶವಾಣಿಯಲ್ಲಿ ಚರ್ಚಾಗೋಷ್ಠಿ, ಚಿಂತನ, ಭಾಷಣಗಳ ಪ್ರಸಾರ
ಧರ್ಮಸ್ಥಳದಲ್ಲಿ ನಡೆಯುವ ಸರ್ವಧರ್ಮ ಸಾಹಿತ್ಯ ಸಮ್ಮೇಳನಗಳ ಕಾರ್ಯದರ್ಶಿಯಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.

ಬೆಳ್ತಂಗಡಿ ತಾಲೂಕು ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿ 7ವರ್ಷ ಸಾಹಿತ್ಯದ ತೇರು ಎಳೆದಿದ್ದಾರೆ. ಅವರ ಅವಧಿಯಲ್ಲಿ ತಾಲೂಕಿನ ಸಾಹಿತ್ಯ ಪರಿಷತ್ತು ಆರಂಭಗೊಂಡಿರುವುದು ಉಲ್ಲೇಖನೀಯ. ಸಾಹಿತ್ಯ ಪರಿಷತ್ತಿನ ಬೆಳ್ತಂಗಡಿ ಘಟಕವನ್ನು ಸದೃಢಗೊಳಿಸಿದ ಮಹನೀಯರು.

ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಮತ್ತು ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.