ಮಂಗಳೂರು: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮೆಡಿಸಿನ್ ವಿಭಾಗವು, ಜುಲೈ 14, 2026ರಂದು ಫಾದರ್ ಮುಲ್ಲರ್ ಸಭಾಂಗಣದಲ್ಲಿ ಡಾ. ಎಂ. ಎಲ್. ಧಾವಲೆ ಸ್ಮಾರಕ ಉಪನ್ಯಾಸ ಮತ್ತು ಸೆಮಿನಾರ್ – 2026 ಅನ್ನು ಆಯೋಜಿಸಿತು.
ಈ ಕಾರ್ಯಕ್ರಮವನ್ನು ಹೋಮಿಯೋಪಥಿ ತಜ್ಞರಾದ ಡಾ. ಎಂ. ಎಲ್. ಧಾವಲೆ ಅವರ ಸ್ಮರಣಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದು, ಹೋಮಿಯೋಪಥಿ ಶಿಕ್ಷಣ, ಸಂಶೋಧನೆ ಹಾಗೂ ಕ್ಲಿನಿಕಲ್ ಚಿಕಿತ್ಸಾ ಕ್ಷೇತ್ರಗಳಿಗೆ ಅವರು ನೀಡಿದ ಅಮೂಲ್ಯ ಮತ್ತು ಚಿರಸ್ಥಾಯಿ ಕೊಡುಗೆಗಳನ್ನು ಸ್ಮರಿಸಲಾಯಿತು.
ಕಾರ್ಯಕ್ರಮದ ವೈಜ್ಞಾನಿಕ ಅಧಿವೇಶನಗಳನ್ನು ಡಾ. ಸಪ್ತರ್ಷಿ ಬ್ಯಾನರ್ಜಿ, ಬಿ ಎಚ್ ಎಮ್ ಎಸ್., ಎಂ ಡಿ. (ಹೋಮ್) ಉಪನಿರ್ದೇಶಕರು, ಬೆಂಗಾಲ್ ಆಲೆನ್ ಮೆಡಿಕಲ್ ಇನ್ಸ್ಟಿಟ್ಯೂಟ್, ಕೋಲ್ಕತ್ತಾರವರು ನಡೆಸಿಕೊಟ್ಟರು. ಇವರು ಅಂತರರಾಷ್ಟ್ರೀಯ ಖ್ಯಾತಿಯ ಹೋಮಿಯೋಪಥಿ ವೈದ್ಯರು, ಶಿಕ್ಷಕರು, ಲೇಖಕರು ಹಾಗೂ ಸಂಶೋಧಕರಾಗಿದ್ದಾರೆ.
ಕಾರ್ಯಕ್ರಮವು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಗಿ, ನಂತರ ಗಣ್ಯರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಇ. ಎಸ್. ಜೆ. ಪ್ರಭುಕಿರಣ್ ಅವರು ಸಭೆಯನ್ನು ಸ್ವಾಗತಿಸಿ, ಸಂಸ್ಥೆಯು ತನ್ನ 42ನೇ ವರ್ಷದ ಪಯಣವನ್ನು ಯಶಸ್ವಿಯಾಗಿ ಮುಂದುವರಿಸುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಉದ್ಘಾಟನೆ ಡಾ. ಎಂ. ಎಲ್. ಧಾವಲೆ ಅವರ ಜನ್ಮದಿನದಂದೇ ನಡೆದಿರುವುದನ್ನು ಸ್ಮರಿಸಿದ ಅವರು, ಪ್ರತಿವರ್ಷ ಆಯೋಜಿಸಲಾಗುವ ಡಾ. ಎಂ. ಎಲ್. ಧಾವಲೆ ಸ್ಮಾರಕ ಉಪನ್ಯಾಸವು ಅವರ ಅಮೂಲ್ಯ ಕೊಡುಗೆಗಳನ್ನು ಸ್ಮರಿಸುವ ಮಹತ್ವದ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು. ಹೋಮಿಯೋಪಥಿ ಶಿಕ್ಷಣದಲ್ಲಿ ಡಾ. ಧಾವಲೆ ಅವರು ಪರಿಚಯಿಸಿದ ನವೀನ ಬೋಧನಾ ವಿಧಾನಗಳನ್ನು ಉಲ್ಲೇಖಿಸಿ, ಅವರ ಆದರ್ಶಗಳು ಮತ್ತು ಶಾಶ್ವತ ಪರಂಪರೆಯಿಂದ ವಿದ್ಯಾರ್ಥಿಗಳು ಹಾಗೂ ವೈದ್ಯರು ಪ್ರೇರಣೆ ಪಡೆಯುವ ಉದ್ದೇಶದಿಂದ ಈ ಒಂದು ದಿನದ ವೈಜ್ಞಾನಿಕ ವಿಚಾರ ಸಂಕೀರ್ಣವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು, ನಂತರ ರೆವರೆಂಡ್ ಫಾದರ್ ಅಗಸ್ಟಸ್ ಮುಲ್ಲರ್ ಮತ್ತು ಡಾ. ಎಂ. ಎಲ್. ಧಾವಲೆ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 9 ಅಧ್ಯಾಪಕರ ಸಂಶೋಧನಾ ಯೋಜನೆಗಳು ಹಾಗೂ 14 ವಿದ್ಯಾರ್ಥಿಗಳ ಸಂಶೋಧನಾ ಯೋಜನೆಗಳು, ಮತ್ತು ಡಾ. ಎಂ. ಎಲ್. ಧಾವಲೆ ಸ್ಮಾರಕ ವಿದ್ಯಾರ್ಥಿ ಸಂಶೋಧನಾ ಯೋಜನೆ ಸೇರಿದಂತೆ ವಿವಿಧ ಸಂಶೋಧನಾ ಉಪಕ್ರಮಗಳ ಅಡಿಯಲ್ಲಿ ಕೈಗೊಳ್ಳಲಾದ ಯೋಜನೆಗಳ ಪ್ರಮುಖ ಸಂಶೋಧಕರು, ವಿದ್ಯಾರ್ಥಿ ಸಂಶೋಧಕರು ಹಾಗೂ ಅವರ ಮಾರ್ಗದರ್ಶಕರನ್ನು ಸನ್ಮಾನಿಸಿ, ವೈಜ್ಞಾನಿಕ ಸಂಶೋಧನೆಯತ್ತ ಅವರು ತೋರಿದ ಬದ್ಧತೆ ಮತ್ತು ಹೋಮಿಯೋಪಥಿ ಕ್ಷೇತ್ರದ ಪ್ರಗತಿಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಗೌರವಿಸಿ, ಸಂಶೋಧನಾ ಯೋಜನೆ ಪೂರ್ಣಗೊಳಿಸಿದ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಉದ್ಘಾಟನಾ ಭಾಷಣವನ್ನು ಮಾಡಿದ ಡಾ. ರಮೇಶ್ ಭಟ್ ಅವರು ಸಭಿಕರನ್ನು ಜೀವಮಾನಪರ್ಯಂತ ಕಲಿಕೆಯ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು. ವೈದ್ಯಕೀಯ ಕ್ಷೇತ್ರವು ಹೊಸಹೊಸ ಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದ್ದರೂ, ಜ್ಞಾನ, ಕರುಣೆ, ಬದ್ಧತೆ ಹಾಗೂ ಸಹಾನುಭೂತಿ ಎಂಬ ಮೂಲಭೂತ ಮೌಲ್ಯಗಳು ರೋಗಿಗಳ ಆರೈಕೆಯಲ್ಲಿ ಅತ್ಯಂತ ಅವಿಭಾಜ್ಯವಾಗಿವೆ ಎಂದು ಅವರು ಹೇಳಿದರು.
ಈ ಮೌಲ್ಯಗಳು ಸಮರ್ಪಿತ ಶಿಕ್ಷಕರಿಂದ ಪೀಳಿಗೆಯಿಂದ ಪೀಳಿಗೆಗೆ ಹಸ್ತಾಂತರಗೊಂಡ ಅಮೂಲ್ಯ ಪರಂಪರೆಯಾಗಿದ್ದು, ವಿದ್ಯಾರ್ಥಿಗಳು ಮತ್ತು ಬೋಧಕ ವೃಂದವು ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರದ ಮೂಲಕ ಸಂಶೋಧನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.
ಆಡಳಿತಾಧಿಕಾರಿಗಳ ಸಂದೇಶದಲ್ಲಿ, ರೆವ. ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾ ಅವರು ಸ್ಮಾರಕ ಉಪನ್ಯಾಸದ ಮಹತ್ವವನ್ನು ಭೂತಕಾಲ, ವರ್ತಮಾನ ಮತ್ತು ಭವಿಷ್ಯ ಎಂಬ ಮೂರು ಆಯಾಮಗಳ ಮೂಲಕ ವಿವರಿಸಿದರು. ಭೂತಕಾಲವು ಸಂಸ್ಥೆಯ ಆರಂಭ ಮತ್ತು ಬೆಳವಣಿಗೆಯನ್ನು ಹಾಗೂ ಡಾ. ಎಂ. ಎಲ್. ಧಾವಲೆ ಅವರ ಅಪಾರ ಕೊಡುಗೆಯನ್ನು ನೆನಪಿಸುತ್ತದೆ ಎಂದು ಅವರು ತಿಳಿಸಿದರು. ವರ್ತಮಾನವು ಈ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸಿ ಮತ್ತಷ್ಟು ಸಮೃದ್ಧಗೊಳಿಸುವ ಜವಾಬ್ದಾರಿಯನ್ನು ಹೊತ್ತಿದೆ.
ಭವಿಷ್ಯವು ಹೋಮಿಯೋಪತಿ ಪದ್ಧತಿಯನ್ನು ಇನ್ನಷ್ಟು ಬಲಪಡಿಸಿ ಸಮಾಜಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಅವಕಾಶಗಳನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸನ್ಮಾನಿಸಲ್ಪಟ್ಟ ಸಂಶೋಧನಾ ಪಂಡಿತರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅವರ ಸಂಶೋಧನಾ ಸಾಧನೆಗಳು ಸಂಸ್ಥೆಯ ಶೈಕ್ಷಣಿಕ ಮತ್ತು ವೈಜ್ಞಾನಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಷನ್ಸ್ನ ನಿರ್ದೇಶಕರಾದ ರೆವ. ಫಾ. ಫಾಸ್ಟಿನ್ ಲೂಕಾಸ್ ಲೋಬೋ ಅವರು, ಅಲದಮರದ ನೆರಳಿನಲ್ಲಿ ವಿನಮ್ರವಾಗಿ ಆರಂಭವಾದ ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಷನ್ಸ್ನ 146 ವರ್ಷಗಳ ಸಮೃದ್ಧ ಪರಂಪರೆಯನ್ನು ಸ್ಮರಿಸಿದರು. ಇಂದು ಅದು ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಹೆಸರಾಂತ ಸಂಸ್ಥೆಗಳ ಜಾಲವಾಗಿ ಬೆಳೆದು ನಿಂತಿರುವುದನ್ನು ಅವರು ಹೆಮ್ಮೆಯಿಂದ ಉಲ್ಲೇಖಿಸಿದರು. ಹೋಮಿಯೋಪಥಿಯ ಮೂಲತತ್ತ್ವವಾದ “ಸಮಾನತೆಯ ನಿಯಮ” ಇಂದಿಗೂ ತನ್ನ ಶಾಶ್ವತ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಹೋಮಿಯೋಪಥಿಯ ವೈಜ್ಞಾನಿಕ ನೆಲೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಅದರ ವ್ಯಾಪಕ ಸ್ವೀಕಾರಾರ್ಹತೆಯನ್ನು ಹೆಚ್ಚಿಸಲು ಸಂಶೋಧನೆಯ ಮಹತ್ವವನ್ನು ಒತ್ತಿಹೇಳಿದರು. ಗಣ್ಯ ಸಂಪನ್ಮೂಲ ವ್ಯಕ್ತಿಯಿಂದ ಅಮೂಲ್ಯ ಜ್ಞಾನವನ್ನು ಪಡೆದು, ವೃತ್ತಿಯ ಅಭಿವೃದ್ಧಿಗಾಗಿ ಅರ್ಥಪೂರ್ಣ ಸಂಶೋಧನಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರು ಎಲ್ಲ ಭಾಗವಹಿಸುವವರನ್ನು ಪ್ರೇರೇಪಿಸಿದರು.
ಮುಖ್ಯ ಅತಿಥಿ ಮತ್ತು ಸಂಪನ್ಮೂಲ ವ್ಯಕ್ತಿಗೆ ಸ್ಮರಣಿಕೆಗಳನ್ನು ನೀಡಿದ ನಂತರ, ಸಂಚಾಲಕರಾದ ಡಾ. ಜಿ. ರಾಜಚಂದ್ರ ರವರು ಗಣ್ಯರು, ಸಂಪನ್ಮೂಲ ವ್ಯಕ್ತಿ, ಸಂಘಟಕರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಉದ್ಘಾಟನಾ ಸಮಾರಂಭವು ಸಂಸ್ಥೆಯ ಗೀತೆಯೊಂದಿಗೆ ಮುಕ್ತಾಯಗೊಂಡಿತು.
ಡಾ. ಸಪ್ತರ್ಷಿ ಬ್ಯಾನರ್ಜಿರವರು ಸಂವಾದಾತ್ಮಕ ವೈಜ್ಞಾನಿಕ ಅಧಿವೇಶನಗಳನ್ನು ನಡೆಸಿಕೊಟ್ಟರು. ಒಟ್ಟು ಮೂರು ವೈದ್ಯಕೀಯ ಅನುಭವಾಧಾರಿತ ಅಧಿವೇಶನಗಳನ್ನು ಆಯೋಜಿಸಲಾಗಿತ್ತು ಮೊದಲ ಅಧಿವೇಶನ ‘ಕ್ಯೂರ್ಡ್ ಕೇಸಸ್: ಡಿಸ್ಕಷನ್ ವಿತ್ ಕಂಪ್ಯಾರೇಟಿವ್ ಮೆಟೀರಿಯಾ ಮೆಡಿಕಾ’ ವಿಷಯದಡಿ ಯಶಸ್ವಿಯಾಗಿ ಗುಣಮುಖಗೊಂಡ ಕ್ಲಿನಿಕಲ್ ಪ್ರಕರಣಗಳನ್ನು ಪ್ರಸ್ತುತಪಡಿಸಿ, ಔಷಧದ ಆಯ್ಕೆ ಮತ್ತು ಕಂಪ್ಯಾರೇಟಿವ್ ಮೆಟೀರಿಯಾ ಮೆಡಿಕಾದ ಆಧಾರದ ಮೇಲೆ ಸವಿವರವಾದ ವಿಶ್ಲೇಷಣೆಯನ್ನು ಮಾಡಲಾಯಿತು. ಎರಡನೇ ಅಧಿವೇಶನ ‘ಡರ್ಮಟಾಲಜಿ: ಲುಕ್ ಅಂಡ್ ಡಯಾಗ್ನೋಸ್ ಥ್ರೂ ಪಿಕ್ಚರ್ಸ್’ ನಲ್ಲಿ ಚರ್ಮರೋಗಗಳ ಕ್ಲಿನಿಕಲ್ ಛಾಯಾಚಿತ್ರಗಳ ಮೂಲಕ ವಿವಿಧ ಚರ್ಮರೋಗಗಳನ್ನು ಗುರುತಿಸುವ ವಿಧಾನಗಳನ್ನು ವಿವರಿಸಿ, ಪ್ರಾಯೋಗಿಕ ಡಯಾಗ್ನೋಸ್ಟಿಕ್ ಕೌಶಲ್ಯಗಳ ಮಹತ್ವವನ್ನು ಒತ್ತಿಹೇಳಲಾಯಿತು.
ಮೂರನೇ ಅಧಿವೇಶನ ‘ಕಾಮನ್ಲಿ ಯೂಸ್ಡ್ ಆರ್ಗನೋಪಥಿಕ್ಸ್ ಇನ್ ಪ್ರಾಕ್ಟೀಸ್’ ನಲ್ಲಿ ದೈನಂದಿನ ಹೋಮಿಯೋಪಥಿ ವೈದ್ಯಕೀಯ ಅಭ್ಯಾಸದಲ್ಲಿ ಸಾಮಾನ್ಯವಾಗಿ ಬಳಸುವ ಆರ್ಗನೋಪಥಿಕ್ ಔಷಧಿಗಳ ಇಂಡಿಕೇಶನ್ಸ್, ಸ್ಕೋಪ್ ಹಾಗೂ ಕ್ಲಿನಿಕಲ್ ಯುಟಿಲಿಟಿ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಪ್ರತಿಯೊಂದು ಅಧಿವೇಶನದಲ್ಲೂ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಇಂಟರ್ನ್ಗಳು, ಬೋಧಕ ವೃಂದ ಹಾಗೂ ಹೋಮಿಯೋಪಥಿ ವೈದ್ಯರು ಉತ್ಸಾಹದಿಂದ ಭಾಗವಹಿಸಿ, ಚರ್ಚೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
ಕಾರ್ಯಕ್ರಮವು ಆಸಕ್ತಿದಾಯಕವಾದ ಪ್ರಶ್ನೋತ್ತರ ಅಧಿವೇಶನದೊಂದಿಗೆ ಸಮಾರೋಪಗೊಂಡಿತು. ಈ ಸಂದರ್ಭದಲ್ಲಿ ಡಾ. ಸಪ್ತರ್ಷಿ ಬ್ಯಾನರ್ಜಿ ಅವರು ಭಾಗವಹಿಸಿದವರ ಅನೇಕ ವೈದ್ಯಕೀಯ (ಕ್ಲಿನಿಕಲ್) ಪ್ರಶ್ನೆಗಳಿಗೆ ಸಮಗ್ರ ಉತ್ತರಗಳನ್ನು ನೀಡುವುದರ ಜೊತೆಗೆ ತಮ್ಮ ಅಪಾರ ಕ್ಲಿನಿಕಲ್ ಅನುಭವದಿಂದ ಪಡೆದ ಪ್ರಾಯೋಗಿಕ ಒಳನೋಟಗಳನ್ನು ಹಂಚಿಕೊಂಡರು.
ಸಮಾರೋಪ ಭಾಷಣದಲ್ಲಿ ಡಾ. ಇ. ಎಸ್. ಜೆ. ಪ್ರಭುಕಿರಣ್ ಅವರು ಸಂಪನ್ಮೂಲ ವ್ಯಕ್ತಿ, ಗಣ್ಯ ಅತಿಥಿಗಳು, ಸಂಘಟನಾ ಸಮಿತಿ ಹಾಗೂ ಎಲ್ಲಾ ಭಾಗವಹಿಸಿದವರಿಗೆ ಕೃತಜ್ಞತೆಗಳನ್ನು ಸಲ್ಲಿಸಿ, ಡಾ. ಎಂ. ಎಲ್. ಧಾವಲೆ ಸ್ಮಾರಕ ಉಪನ್ಯಾಸ ಮತ್ತು ಸೆಮಿನಾರ್–2026 ಅನ್ನು ಸ್ಮರಣೀಯ ಶೈಕ್ಷಣಿಕ ಕಾರ್ಯಕ್ರಮವನ್ನಾಗಿ ರೂಪಿಸಿದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ಈ ಸೆಮಿನಾರ್ ಡಾ. ಎಂ. ಎಲ್. ಧಾವಲೆ ಅವರ ಚಿರಸ್ಥಾಯಿ ಆದರ್ಶಗಳನ್ನು ಮತ್ತೊಮ್ಮೆ ಬಲಪಡಿಸುವಲ್ಲಿ ಯಶಸ್ವಿಯಾಯಿತು. ಜೊತೆಗೆ, ಭಾಗವಹಿಸಿದವರಿಗೆ ಕ್ಲಿನಿಕಲ್ ಅಭ್ಯಾಸ, ಸಂಶೋಧನೆ ಹಾಗೂ ಮಾನವೀಯತೆಯುತ ರೋಗಿ ಆರೈಕೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರೇರಣೆ ನೀಡುವುದರೊಂದಿಗೆ, ಹೋಮಿಯೋಪತಿಯ ನಿರಂತರ ವೈಜ್ಞಾನಿಕ ಬೆಳವಣಿಗೆಗೆ ತಮ್ಮ ಅಮೂಲ್ಯ ಕೊಡುಗೆ ನೀಡುವಂತೆ ಉತ್ತೇಜಿಸಿತು. ಈ ಕಾರ್ಯಕ್ರಮವನ್ನು ಡಾ. ಪಾರ್ವತೀ ನಂದರಾಜನ್ ಮತ್ತು ಡಾ. ಮುಬೀನ್ ಜಕಾತಿ ಅವರು ಸಮರ್ಥವಾಗಿ ನಿರೂಪಿಸಿದರು.

