ಕಲಬುರಗಿ: ಬಡತನದ ಜತೆ ಸೆಣಸಿ, ಸತ್ವ ಪರೀಕ್ಷೆಗಳನ್ನು ಎದುರಿಸಿ ‘ಕ್ರೈಸ್’ನ ವಸತಿ ಶಾಲೆಗಳಿಗೆ ಅಡಿ ಇಟ್ಟ ವಿದ್ಯಾರ್ಥಿಗಳು, ಅಲ್ಲಿನ ಮೂಲಸೌಕರ್ಯ ಕೊರತೆಗಳ ನಡುವೆಯೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ‘ಶತಕದ ಸಾಧನೆ’ ಮಾಡಿ ಸರ್ಕಾರದ ಗಮನ ಸೆಳೆದಿದ್ದಾರೆ.

2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದ 8.56 ಲಕ್ಷ ವಿದ್ಯಾರ್ಥಿಗಳ ಪೈಕಿ 1.63 ಲಕ್ಷ ವಿದ್ಯಾರ್ಥಿಗಳು 20 ಕೃಪಾಂಕಗಳಿಂದ ತೇರ್ಗಡೆ ಹೊಂದಿರುವುದು ಚರ್ಚೆಗೆ ಒಳಗಾಗಿತ್ತು.

ಇದರ ನಡುವೆಯೇ ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) 798 ವಸತಿ ಶಾಲೆಗಳ ಪೈಕಿ 360 ವಸತಿ ಶಾಲೆಗಳು ಶೇ 100ರಷ್ಟು ಫಲಿತಾಂಶ ದಾಖಲಿಸುವ ಮೂಲಕ ‘ಭರವಸೆಯ ಬೆಳಕು’ ಮೂಡಿಸಿವೆ.

‘ಕ್ರೈಸ್’ ಸಂಸ್ಥೆ ನಡೆಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಏಕಲವ್ಯ ಮಾದರಿ, ಡಾ.ಬಿ.ಆರ್‌.ಅಂಬೇಡ್ಕರ್, ಶ್ರೀಮತಿ ಇಂದಿರಾಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳ 35,303 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಅವರಲ್ಲಿ 33,891 ವಿದ್ಯಾರ್ಥಿಗಳು (ಶೇ 96ರಷ್ಟು) ಪಾಸಾಗಿದ್ದಾರೆ. ರಾಜ್ಯದ ಸರಾಸರಿಗಿಂತ ಶೇ 22.6ರಷ್ಟು ಹೆಚ್ಚಿನ ಫಲಿತಾಂಶ ದಾಖಲಿಸಿದ್ದಾರೆ. ಹಲವು ವಸತಿ ಶಾಲೆಗಳಲ್ಲಿ ಅಲ್ಪ ‘ಗೌರವಧನ’ ಪಡೆಯುತ್ತಿದ್ದರೂ ಶ್ರದ್ಧೆಯಿಂದ ಪಾಠ ಮಾಡಿ, ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಿದ ಅತಿಥಿ ಶಿಕ್ಷಕರ ಪಾತ್ರವನ್ನೂ ಈ ಸಂದರ್ಭದಲ್ಲಿ ಮರೆಯುವಂತಿಲ್ಲ.