ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ದಿ ಟೈಮ್ಸ್ ಆಫ್ ಇಂಡಿಯಾ ನೀಡುವ ಟೈಮ್ಸ್ ಬ್ಯುಸಿನೆಸ್ ಅವಾರ್ಡ್ ದೊರಕಿದೆ. ಮಂಗಳೂರಿನ ಅವತಾರ್ ಹೋಟೇಲ್ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ನೀಡಿ ಗೌರವಿಸಲಾಗಿದೆ.
ಅಂತರಾಷ್ಟ್ರೀಯ ಬಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಪರವಾಗಿ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಹಾಗೂ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ.ಎಸ್. ಪ್ರಶಸ್ತಿಯನ್ನು ಸ್ವೀಕರಿಸಿದರು.
ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಬಪ್ಪಳಿಗೆಯಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆ, ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯ, ಅಂಬಿಕಾ ಪದವಿ ಮಹಾವಿದ್ಯಾಲಯ ಹಾಗೂ ನೆಲ್ಲಿಕಟ್ಟೆಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ಮುನ್ನಡೆಯುತ್ತಿವೆ.
ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮಾತ್ರವಲ್ಲದೆ ದೇಶಪ್ರೇಮ, ಧರ್ಮಜಾಗೃತಿ, ಸನಾತನ ಸಂಸ್ಕೃತಿ – ಸಂಸ್ಕಾರಗಳನ್ನು ಪ್ರತಿನಿತ್ಯ ವಿದ್ಯಾರ್ಥಿಗಳಲ್ಲಿ ಒಡಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಯೋಗವನ್ನು ಪಠ್ಯಕ್ರಮದಲ್ಲಿ ಸೇರಿಸಿದ ರಾಜ್ಯದ ಮೊದಲ ಪದವಿ ಪೂರ್ವ ಶಿಕ್ಷಣ ಸಂಸ್ಥೆಯಾಗಿ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳು ಗುರುತಿಸಿಕೊಂಡಿವೆ.
ತಮ್ಮ ಮಕ್ಕಳು ಸಂಸ್ಕಾರವಂತರಾಗಿ ಬೆಳೆಯಬೇಕೆಂಬ ಉದ್ದೇಶದಿಂದಲೇ ಎಷ್ಟೋ ಮಂದಿ ಹೆತ್ತವರು ಅಂಬಿಕಾವನ್ನು ಅರಸಿ ಬರುತ್ತಿದ್ದಾರೆ. ಆಧುನಿಕ ದಿನಮಾನಗಳ ನಕಾರಾತ್ಮಕ ಆಕರ್ಷಣೆಗಳಿಗೆ ವಿದ್ಯಾರ್ಥಿಗಳು ಬಲಿಯಾಗದಂತೆ ಕಾಯುವುದಲ್ಲದೆ ಅತ್ಯುತ್ತಮ, ರಾಷ್ಟçಕ್ಕೆ ಪೂರವಾದ ವಿಚಾರಧಾರೆಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಾಗುತ್ತಿದೆ. ದೇಶದ ಸಾಹಸಗಾಥೆಗಳ ನಿಜ ಇತಿಹಾಸವನ್ನು ವಿದ್ಯಾರ್ಥಿಗಳ ಮುಂದೆ ಅನಾರಣಗೊಳಿಸಿ ದೇಶದ ಬಗೆಗೆ ಹೆಮ್ಮೆ ಮೂಡುವಂತೆ ಮಾಡಲಾಗುತ್ತಿದೆ.
ನಮ್ಮ ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ದೇಶದ ರಾಯಭಾರಿಯಂತಾಗಬೇಕು. ಭಗವದ್ಗೀತೆಯಂತಹ ಉತ್ಕೃಷ್ಟ ಹಾಗೂ ಪವಿತ್ರ ವಿಚಾರಗಳಿಂದ ನಮ್ಮ ಮಕ್ಕಳು ಪುನೀತರಾಗಿ ಬೆಳೆಯಬೇಕು. ನಮ್ಮ ಆಚಾರ ವಿಚಾರಗಳನ್ನು ಮನನ ಮಾಡಿಕೊಂಡು ಬೆಳೆದಾಗ ಅವರೆಲ್ಲರೂ ನಿಜಾರ್ಥದಲ್ಲಿ ಭಾರತೀಯರೆನಿಸುತ್ತಾರೆ. ಶಿಕ್ಷಣ ಸಂಸ್ಥೆಗಳು ದೇಶದ ಬಗೆಗೆ ಅಭಿಮಾನವಿಲ್ಲದವರನ್ನು ಸೃಷ್ಟಿಸಿದರೆ ಅದು ಈ ದೇಶಕ್ಕೆ ಮಾಡುವ ಅವಮಾನವೆನಿಸುತ್ತದೆ.
– ಸುಬ್ರಮಣ್ಯ ನಟ್ಟೋಜ, ಅಧ್ಯಕ್ಷರು, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳು

