ಧಾರವಾಡ: ಧಾರವಾಡದ ಜುಬಿಲಿ ಸರ್ಕಲ್‌ನಲ್ಲಿರುವ ದೇಶಪಾಂಡೆ ಆಸ್ಪತ್ರೆಯಲ್ಲಿ ರೋಟ್ ವೈರಲ್ ಅತಿಸಾರ ಪೌಷ್ಟಿಕಾಂಶ ಹಾಗೂ ರಕ್ತಹೀನತೆಯಿಂದಾಗಿ ದಾಖಲಾಗಿದ್ದ ಅಭಿನಂದನ್ ಎಂಬ 13 ತಿಂಗಳು ಮಗುವಿಗೆ ಪ್ರಪಂಚದಲ್ಲಿಯೇ ಅತೀ ಅಪರೂಪದ ರಕ್ತದ ಗುಂಪಾದ O+ve ಬಾಂಬೆ ಬ್ಲಡ್ ಗ್ರೂಪ್ ರಕ್ತದ ಅವಶ್ಯಕತೆ ಇತ್ತು.

ತಕ್ಷಣವೇ ಓರ್ವ ವ್ಯಕ್ತಿ ದೂರದ ಊರಿನಿಂದ ಬಂದು ರಕ್ತ ದಾನ ಮಾಡಿ ಮಾನವೀಯತೆ ಮೆರೆದಿದ್ದಾನೆ. ಎಷ್ಟೇ ಹುಡುಕಿದರೂ ಆ ರಕ್ತ ಸಿಗದಿದ್ದಾಗ ಶ್ರೀ ವಿವೇಕಾನಂದ ರಕ್ತದಾನ ಫೌಂಡೇಶನ್ ಸಂಪರ್ಕಿಸಲಾಯಿತು.

ಫೌಂಡೇಶನ್ ಸಂಸ್ಥಾಪಕರಾದ ಶಿವಕುಮಾರ್ ರಟ್ಟಿಹಳ್ಳಿ ಅವರು ವಿಜಯಪುರದ ಅಪರೂಪದ ರಕ್ತದಾನಿ ಮಹಾಂತೇಶ್ ತುಂಬರಕಟ್ಟಿ ಅವರನ್ನು ಸಂಪರ್ಕಿಸಿ ರೋಗಿಯ ಪರಿಸ್ಥಿತಿಯನ್ನು ವಿವರಿಸಿದಾಗ ತಕ್ಷಣವೇ ಬರಲು ಒಪ್ಪಿಕೊಂಡು 197.7 ಕಿಲೋ ಮೀಟರ್ ದೂರದಿಂದ ಅಂದರೆ ವಿಜಯಪುರದಿಂದ ರಕ್ತದಾನ ಮಾಡಲು ಬಂದು ಸಂಜೆ 6ಕ್ಕೆ ಧಾರವಾಡದ ಜರ್ಮನ್ ಆಸ್ಪತ್ರೆಯಲ್ಲಿ ಆ ರಕ್ತವನ್ನು ದಾನ ಮಾಡಿದ್ದಾರೆ.

ಅಪರೂಪದ ರಕ್ತದಾನಿಯಾದ ಮಹಾಂತೇಶ್ ತುಂಬರಕಟ್ಟಿ ಅವರಿಗೆ ಶ್ರೀ ವಿವೇಕಾನಂದ ರಕ್ತದಾನ ಫೌಂಡೇಶನ್ ಸಂಸ್ಥಾಪಕರಾದ ಶಿವಕುಮಾರ್ ರಟ್ಟಿಹಳ್ಳಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿ ನೇತ್ರಾವತಿ ಮಡ್ಲಿ ಫೌಂಡೇಶನ್ ಸರ್ವ ಸದಸ್ಯರು ಮತ್ತು ದೇಶಪಾಂಡೆ ಆಸ್ಪತ್ರೆಯ ಎಲ್ಲ ವೈದ್ಯಕೀಯ ಸಿಬ್ಬಂದಿ ಧನ್ಯವಾದ ಸಲ್ಲಿಸಿದ್ದಾರೆ.