ದಾವಣಗೆರೆ : ಜಿಲ್ಲೆಯ ಚನ್ನಗಿರಿ ಠಾಣೆಯ ಪೊಲೀಸರ ಕಸ್ಟಡಿಯಲ್ಲಿದ್ದ ಆರೋಪಿ ಸಾವನ್ನಪ್ಪಿದ್ದು, ವಿಷಯ ತಿಳಿಯುತ್ತಿದ್ದಂತೆ ಮೃತ ವ್ಯಕ್ತಿಯ ಸಂಬಂಧಿಕರು ಪೊಲೀಸ್ ಠಾಣೆ ಗೆ ನುಗ್ಗಿ ಠಾಣೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಿದ ಘಟನೆ ನಡೆದಿದೆ. ಠಾಣೆಯ ಮುಂಭಾಗದಲ್ಲಿ ನೂರಾರು ಜನರು ಜಮಾಯಿಸಿದ್ದು, ಇದು ಲಾಕಪ್​ ಡೆತ್ ಎಂದು ಆರೋಪಿಸುತ್ತಿದ್ದಾರೆ.

ಚನ್ನಗಿರಿ ಪಟ್ಟಣದ ಟಿಪ್ಪು ನಗರ ನಿವಾಸಿಯಾಗಿದ್ದ ಅದೀಲ್ (30) ಎನ್ನುವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈತ ಒಸಿ ಆಡಿಸುತ್ತಿದ್ದ ಪ್ರಕರಣದಲ್ಲಿ ಪೊಲೀಸರಿಂದ ತನಿಖೆಗೆ ಒಳಗಾಗಿದ್ದ. ಸಂಜೆ ಪೊಲೀಸರು ಈತನನ್ನು ಠಾಣೆಗೆ ಕರೆತಂದಿದ್ದ‌ರು.

ಇದ್ದಕ್ಕಿದ್ದಂತೆ ಬಿಪಿ ಲೋ ಆಗಿ ಬಿದ್ದ ಅದಿಲ್‌ನನ್ನು ಪೊಲೀಸರು ಅಸ್ಪತ್ರೆಗೆ ಸಾಗಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅದಿಲ್‌ ಸಾವನ್ನಪ್ಪಿದ್ದ. ಅಕ್ರೋಶಗೊಂಡ ಆರೋಪಿ ಸಂಬಂಧಿಕರು, ಆರೋಪಿಯ ಸಾವಿಗೆ ಪೊಲೀಸರೇ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿ ದೊಂಬಿ ಎಬ್ಬಿಸಿದ್ದಾರೆ. ಪೊಲೀಸರು ನೀಡಿದ ಹಿಂಸೆಯ ಪರಿಣಾಮ ಲಾಕಪ್‌ ಡೆತ್‌ ಆಗಿದೆ, ಅದನ್ನು ಮುಚ್ಚಿಡಲು ಲೋ ಬಿಪಿ ನಾಟಕವಾಡಿದ್ದಾರೆ ಎಂದು ಆರೋಪಿಸಿದ್ದಾರೆ.