ಗುವಾಹಟಿ : ಖ್ಯಾತ ಗಾಯಕರಾದ ಝುಬೀನ್ ಗರ್ಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಅಸ್ಸಾಂ ಪೊಲೀಸರು, ಬ್ಯಾಂಡ್ ಸಹೋದ್ಯೋಗಿ ಶೇಖರ್ ಜ್ಯೋತಿ ಗೋಸ್ವಾಮಿ ಹಾಗೂ ಸಹ ಗಾಯಕಿ ಅಮೃತಪರ್ವ ಮಹಾಂತ ಎಂಬುವವರನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದವರ ಸಂಖ್ಯೆ 4ಕ್ಕೇರಿದೆ. ಸೆ.19ರಂದು ನಾರ್ತ್‍ ಈಸ್ಟ್ ಇಂಡಿಯಾ ಫೆಸ್ಟಿವಲ್ ವೇಳೆ ನಡೆದ ಯಾಚ್ ಪಾರ್ಟಿಯಲ್ಲಿ ಈ ಇಬ್ಬರೂ ಗರ್ಗ್ ಜತೆಗೆ ಇದ್ದರು. 52 ವರ್ಷ ವಯಸ್ಸಿನ ಗರ್ಗ್ ಈಜಲು ತೆರಳಿದ್ದು, ಅವರ ಮೃತದೇಹ ನೀರಿನಲ್ಲಿ ಕೆಳಮುಖವಾಗಿ ತೇಲುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಅಸ್ಸಾಂ ಪೊಲೀಸ್ ಪಡೆಯ ವಿಶೇಷ ತನಿಖಾ ತಂಡ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದು, ಗರ್ಗ್ ಅವರ ತೀರಾ ಸಮೀಪದಲ್ಲಿ ಈಜುತ್ತಿದ್ದ ಮಹಾಂತ ತನ್ನ ಮೊಬೈಲ್‍ಫೋನ್‍ನಲ್ಲಿ ಇಡೀ ಘಟನೆಯನ್ನು ದಾಖಲಿಸಿಕೊಂಡಿದ್ದಾಳೆ ಎಂದು ಮೂಲಗಳು ಹೇಳಿವೆ. ಕಳೆದ ಆರು ದಿನಗಳ ಅವಧಿಯಲ್ಲಿ ಇಬ್ಬರನ್ನೂ ತೀವ್ರ ವಿಚಾರಣೆಗೆ ಗುರಿಪಡಿಸಲಾಗಿತ್ತು.

ಇದಕ್ಕೂ ಮುನ್ನ ಗರ್ಗ್ ಅವರ ವ್ಯವಸ್ಥಾಪಕ ಸಿದ್ಧಾರ್ಥ್ ಶರ್ಮಾ ಮತ್ತು ನಾರ್ತ್‍ಈಸ್ಟ್ ಇಂಡಿಯಾ ಫೆಸ್ಟಿವಲ್ ವ್ಯವಸ್ಥಾಪಕ ಶ್ಯಾಂಕಾನು ಮಹಾಂತ ಅವರನ್ನು ಬುಧವಾರ ಬಂಧಿಸಲಾಗಿತ್ತು. ಅವರ ಜತೆ ಗುರುವಾರ ಬಂಧಿಸಲ್ಪಟ್ಟ ಇಬ್ಬರನ್ನೂ ವಿಚಾರಣೆಗೆ ಗುರಿಪಡಿಸಬೇಕಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.