ಬಿಹಾರ: ಅರ್ವಾಲ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ನಿವೃತ್ತ ಶಿಕ್ಷಕನೊಬ್ಬ ತನ್ನ ಪತ್ನಿಯನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಪತ್ನಿಯನ್ನು 12 ತುಂಡುಗಳಾಗಿ ಕತ್ತರಿಸಿದ್ರೂ ಆತನ ಸಿಟ್ಟು ಕಡಿಮೆ ಆಗಿಲ್ಲ, ನಂತರ ಸತ್ತ ಹೆಂಡತಿ ಬೆರಳನ್ನು ಕತ್ತರಿಸಿದ್ದಾನೆ.

ಮೆಹೆಂದಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಜಮುಹಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 76 ವರ್ಷದ ನಿವೃತ್ತ ಶಿಕ್ಷಕ ಬೀರಬಲ್ ಪ್ರಸಾದ್‌ ತನ್ನ ಪತ್ನಿ ಸುಮಂತಿ ಸಿನ್ಹಾಳನ್ನು ಹತ್ಯೆಗೈದಿದ್ದಾನೆ. ಇಬ್ಬರ ಮಧ್ಯೆ ನಡೆದ ಸಣ್ಣ ಜಗಳ ಬೀರಬಲ್‌ ಕೋಪವನ್ನು ನೆತ್ತಿಗೇರಿಸಿದೆ. ಈ ಘಟನೆ ನಡೆಯುವ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ.

ಆರೋಪಿ ಮೊಮ್ಮಗ ಮನೆಗೆ ಬರ್ತಿದ್ದಂತೆ ರಕ್ತ ನೋಡಿ ಕೂಗಿದ್ದಾನೆ. ಅಲ್ಲಿಗೆ ಬಂದ ಸೊಸೆ ಹಾಗೂ ನೆರೆಯವರಿಗೆ ಆಯುಧ ತೋರಿಸಿ ಆರೋಪಿ ಹೆದರಿಸಿದ್ದಾನೆ. ಇನ್ನೊಂದು ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ ಸೊಸೆ – ಮೊಮ್ಮಗ ತಮ್ಮ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ.