ಮೈಸೂರು: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಖಾತೆಯಲ್ಲಿದ್ದ  ಹಣ ದುರ್ಬಳಕೆ ಮಾಡಲಾಗಿದೆ ಎಂದು ಪತ್ನಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎಟಿಎಂ ಕಾರ್ಡ್ ಹಾಗೂ ಯುಪಿಐ ನಿಂದ ಹಣ ವಿತ್ ಡ್ರಾ ಹಾಗೂ ವರ್ಗಾವಣೆ ಆಗಿದೆ ಎಂದು ಆರೋಪಿಸಿದ್ದಾರೆ.

ಪತಿ ಆತ್ಮಹತ್ಯೆಗೆ ಶರಣಾದ ಸುಮಾರು ಒಂದು ತಿಂಗಳ ಅವಧಿಯಲ್ಲಿ 7.5 ಲಕ್ಷ ಹಣ ದುರ್ಬಳಕೆ ಆಗಿದೆ ಎಂದು ಆರೋಪಿಸಿದ್ದಾರೆ. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಗಣೇಶ್ ಜೂನ್ ತಿಂಗಳಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ಪತ್ನಿ ಕೃಪಾ ರವರು ಪತಿ ಗಣೇಶ್ ರವರ ಲ್ಯಾಪ್ ಟಾಪ್ ಪರಿಶೀಲಿಸಿದಾಗ ಜೂನ್ 27 ರಿಂದ ಆಗಸ್ಟ್ 1 ರ ವರೆಗೆ 7.5 ಲಕ್ಷ ಹಣ ಎಟಿಎಂ ನಿಂದ ವಿತ್ ಡ್ರಾ ಆಗಿದೆ ಹಾಗೂ ಯುಪಿಐ ಮೂಲಕ ವರ್ಗಾವಣೆ ಆಗಿದೆ.

ಗಣೇಶ್ ರವರು ಆತ್ಮಹತ್ಯೆ ಮಾಡಿಕೊಂಡ ನಂತರ ಎಟಿಎಂ ಕಾರ್ಡ್ ಗಳು ಪೊಲೀಸರ ಬಳಿ ಇದೆ ಎಂದು ಪತ್ನಿ ಕೃಪಾ ನಂಬಿದ್ದಾರೆ.ಹೀಗಿದ್ದೂ ಹಣ ಹೇಗೆ ವಿತ್ ಡ್ರಾ ಆಗಿದೆ ಎಂಬುದು ನಿಗೂಢ ಸಂಗತಿ.ಪತಿ ಖಾತೆ ಹಣ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಪತ್ನಿ ಪ್ರಕರಣ ದಾಖಲಿಸಿದ್ದಾರೆ.