ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರದ ಪೊಲೀಸ್ ಠಾಣೆಯಲ್ಲೇ ಬಿಗಿ ಬಂದೋಬಸ್ತ್ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ವಿಚಾರಣೆ ಇರುವ ಪೊಲೀಸ್ ಠಾಣೆಗೆ ಬೆಂಗಳೂರು ಇತಿಹಾಸದಲ್ಲೇ ಮೊದಲ ಬಾರಿಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ 13 ಆರೋಪಿಗಳ ವಿಚಾರಣೆ ನಡೆಯುತ್ತಿರುವ ಅನ್ನಪೂರ್ಣೇಶ್ವರಿ ನಗರ ಠಾಣೆ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. 200 ಮೀಟರ್ ವ್ಯಾಪ್ತಿಯಲ್ಲಿ 5 ದಿನಗಳ ಕಾಲ 144 ಸೆಕ್ಷನ್ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ. ಇಂದಿನಿಂದ ಜೂನ್ 17ರ ತನಕ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಸುತ್ತಾ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಇಂದು ಕಮಿಷನರ್ ಬಿ.ದಯಾನಂದ್ ಅವರು ಭೇಟಿ ನೀಡಿದ್ದರು. ನಿಷೇಧಾಜ್ಞೆ ಜಾರಿಯಾಗುವುದರ ಜೊತೆ ಪೊಲೀಸ್ ಠಾಣೆಯ ಸುತ್ತಾ ಶಾಮಿಯಾನ ಅಳವಡಿಕೆ ಮಾಡಲಾಗಿದೆ. ಹೊರಗಡೆಯಿಂದ ಠಾಣೆ ಒಳಗಡೆ ಏನು ನಡೆಯುತ್ತಿದೆ ಅನ್ನೋದು ಕಾಣದಂತೆ ಸಂಪೂರ್ಣವಾಗಿ ತೆರೆ ಎಳೆಯಲಾಗಿದೆ. ಯಾರಿಗೂ ಠಾಣೆಯ ದೃಶ್ಯಾವಳಿಗಳು ಸಿಗದಂತೆ ಶಾಮಿಯಾನದ ಹೊದಿಕೆ ಹಾಕಲಾಗಿದೆ.

