ಬೆಂಗಳೂರು: ಬೈಕ್‌ ವಿಚಾರವಾಗಿ ತಂದೆಯೊಬ್ಬ ಮಗನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ.

ಬೈಕ್‌ ತೆಗೆದುಕೊಂಡು ಹೊರಗೆ ಹೋದ ತಂದೆ, ಬೈಕ್‌ನ ಕೀ ಕಳೆದುಕೊಂಡು, ಅದನ್ನು ಮನೆಗೆ ತೆಗೆದುಕೊಂಡು ಹೋಗದೆ, ಬರಿಗೈಯಲ್ಲಿ ಮನೆಗೆ ತೆರಳಿದ್ದಾನೆ. ಇದೇ ವಿಚಾರವಾಗಿ ಮಗ ಹಾಗೂ ತಂದೆ ಮಧ್ಯೆ ಜಗಳ ನಡೆದಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ.

ಅಂಜನ್‌ ಕುಮಾರ್‌ (27) ಹತ್ಯೆಗೀಡಾದ ಯುವಕ. ಕೊಲೆ ಆರೋಪಿ ವೆಂಕಟೇಶ್‌ (57) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಸಂಜೆ ವೆಂಕಟೇಶ್‌ ಬೈಕ್‌ ತೆಗೆದುಕೊಂಡು ಹೋಗಿದ್ದರು. ಸಂಜೆ ಹೊರಗೆ ಹೋಗಿ ಮದ್ಯಪಾನ ಮಾಡಿದ್ದ ಅವರು ಅದೇ ನಶೆಯಲ್ಲಿ ಬೈಕ್‌ ಕೀ ಕಳೆದುಕೊಂಡಿದ್ದರು.

ಇದೇ ಕಾರಣಕ್ಕಾಗಿ ಬೈಕ್‌ ಬಿಟ್ಟು ಮನೆಗೆ ತೆರಳಿದ್ದರು. ಸೋಮವಾರ ಬೆಳಗ್ಗೆ ಮಗ ಅಂಜನ್‌ ಬೈಕ್‌ ಎಲ್ಲಿ ಎಂದು ಪ್ರಶ್ನಿಸಿದ್ದ. ಆಗ ಇಬ್ಬರ ಮಧ್ಯೆ ಜಗಳ ನಡೆದಿದೆ. ಅಂಜನ್‌ನ ಎಡಭಾಗಕ್ಕೆ ಚಾಕು ಇರಿದ ಕಾರಣ ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ.