ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿದೆ. ಕಳೆದ ಎಂಟು ದಿನದಿಂದಲೂ ದರ್ಶನ್ ಕಾಮಾಕ್ಷಿಪಾಳ್ಯ ಪೊಲೀಸರ ವಶದಲ್ಲಿದ್ದಾರೆ. ಸತತ ವಿಚಾರಣೆ, ತನಿಖೆಗಳು ನಡೆಯುತ್ತಲೇ ಇವೆ.
ಇತ್ತೀಚೆಗಷ್ಟೆ ನ್ಯಾಯಾಲಯದ ಆದೇಶದಂತೆ ತಮ್ಮ ವಕೀಲರನ್ನು ದರ್ಶನ್ ಪೊಲೀಸ್ ಠಾಣೆಯಲ್ಲಿ ಭೇಟಿ ಮಾಡಿ ಪ್ರಕರಣದ ಬಗ್ಗೆ ಚುಟುಕಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ದರ್ಶನ್ ಪೊಲೀಸರ ಮುಂಚೆ ಸ್ವ-ಇಚ್ಛಾ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ.
ಕೊಲೆಯಲ್ಲಿ ತಾವು ಭಾಗಿ ಆಗಿರುವ ವಿಷಯದಿಂದ ಹಿಡಿದು ಪ್ರಕರಣದಲ್ಲಿ ತಮ್ಮ ಹೆಸರು ಮುನ್ನೆಲೆಗೆ ಬರದಂತೆ ತಡೆಯಲು ಮಾಡಿದ್ದ ಪ್ರಯತ್ನ, ಪ್ರದೋಶ್ಗೆ 30 ಲಕ್ಷ ರೂಪಾಯಿ ಹಣ ನೀಡಿದ್ದು, ಆ ನಂತರ ಪ್ರಭಾವಿಗಳನ್ನು ಸಂಪರ್ಕಿಸಿ ಘಟನೆ ಬಗ್ಗೆ ಮಾಹಿತಿ ನೀಡಿದ್ದು ಎಲ್ಲವನ್ನೂ ಹೇಳಿದ್ದಾರೆ ಎನ್ನಲಾಗುತ್ತಿದೆ.
ಈ ಪ್ರಕರಣದಲ್ಲಿ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿದವರ ಸಂಖ್ಯೆ ಹೆಚ್ಚಿದೆ. ಅದರಲ್ಲಿ ದರ್ಶನ್ ಸಹ ಒಬ್ಬರಾಗಿದ್ದು, ಸ್ವ-ಇಚ್ಛೆ ಹೇಳಿಕೆ ದಾಖಲಿಸಿದಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಆಗಬಹುದೆಂಬ ನಿರೀಕ್ಷೆಯಿಂದ ಹಾಗೂ ಪೊಲೀಸ್ ಕಸ್ಟಡಿಯನ್ನು ಆದಷ್ಟು ಬೇಗ ಅಂತ್ಯಗೊಳಿಸುವ ದೃಷ್ಟಿಯಿಂದ ದರ್ಶನ್ ಹೀಗೆ ಮಾಡಿರಬಹುದು ಎನ್ನಲಾಗುತ್ತಿದೆ.
ಇನ್ನು ನಾಳೆ (ಜೂನ್ 20) ದರ್ಶನ್ ಹಾಗೂ ಇತರೆ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದ್ದು, ನಾಳೆ ನ್ಯಾಯಾಲಯದ ಆದೇಶದಂತೆ ದರ್ಶನ್ ಹಾಗೂ ಇತರ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಪಡಬೇಕಾಗಬಹುದು.