ಬೆಂಗಳೂರು: ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲು ಸೇರಿರುವ ದರ್ಶನ್ ಅಲ್ಲಿ ಸಾಕಷ್ಟು ಜರ್ಜರಿತರಾಗಿದ್ದಾರೆ. ಕಠಿಣ ನಿಯಮಗಳಿಂದ ಕಂಗಾಲಾಗಿದ್ದಾರೆ. ನಿನ್ನೆಯ ಪ್ರಬಲ ವಾದ. ಇಂದು ಕೂಡ ದಾಸನ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಮಹತ್ವ ಪಡೆದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿನಲ್ಲಿ ದರ್ಶನ್ ಈಗಾಗಲೇ ಶತದಿನೋತ್ಸವ ಆಚರಿಸಿದ್ದಾರೆ. ಜೈಲುವಾಸ ಸಹಿಸಲಾಗದೆ ಒದ್ದಾಡುತ್ತಿದ್ದ ದಾಸ ಕೊನೆಗೂ ಕೊಂಚ ಸಮಾಧಾನಪಡುವಂತಾಗಿದೆ. 3 ಬಾರಿ ಮೂಂದೂಡಿಕೆಯಾಗಿದ್ದ ಜಾಮೀನು ಅರ್ಜಿ ವಿಚಾರಣೆ ನಿನ್ನೆ ನಡೆದಿದೆ.

ಹಿರಿಯ ವಕೀಲ ಸಿ.ವಿ. ನಾಗೇಶ್ ದರ್ಶನ್‌ ಪರ ಪ್ರಬಲ ವಾದ ಮಂಡಿಸಿದ್ದು ಪೊಲೀಸರು ಸರಿಯಾಗಿ ತನಿಖೆ ಮಾಡಿಲ್ಲ ಎಂದು ವಾದಿಸಿದ್ದಾರೆ. ಪೊಲೀಸರೇ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿರುವ ಮಾಹಿತಿಗೂ ಸಾಕ್ಷಿಗಳು ನೀಡಿರುವ ಹೇಳಿಕೆಗೂ ಸಾಕಷ್ಟು ವ್ಯತ್ಯಾಸವಿದೆ. ಅಲ್ಲದೆ ಮನೆಯಿಂದ ಪೊಲೀಸರು ವಶಕ್ಕೆ ಪಡೆದ ಬಟ್ಟೆ, ಶೂಗಳ ಬಗ್ಗೆ ಪ್ರಸ್ತಾಪಿಸಿ, ಪಂಚನಾಮೆಯಲ್ಲಿ ದರ್ಶನ್‌ ಚಪ್ಪಲಿ ಧರಿಸಿದ್ದರು ಎಂದು ಉಲ್ಲೇಖಿಸಲಾಗಿದೆ.

ಆದರೆ ರಿಕವರಿ ಮಾಡಿರುವ ಆ ಶೂಗಳಲ್ಲಿ ರಕ್ತದ ಕಲೆ ಇದೆ ಎಂದು ಹೇಳಲಾಗಿದೆ. ದರ್ಶನ್ ಧರಿಸಿದ್ದ ಬಟ್ಟೆಗಳನ್ನು ಒಗೆದು ಒಣಗಿಸಿದ್ದಾರೆ ಎಂದು ಹೇಳಿಕೆ ನೀಡಿದ ಬಳಿಕ, ಬಟ್ಟೆ ರಿಕವರಿ ಮಾಡಲಾಗಿದೆ. ಒಗೆದ ಬಟ್ಟೆಗಳಲ್ಲಿ ರಕ್ತದ ಕಲೆ ಇರಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ವಾದಗಳು ಮಹತ್ವ ಪಡೆದಿದ್ದು ದರ್ಶನ್​ಗೆ ಜಾಮೀನು ಸಿಗುವ ಕನಸಿಗೆ ರೆಕ್ಕೆಪುಕ್ಕ ಬಂದಿದೆ.

ನಿನ್ನೆ ದರ್ಶನ್​ ಪರ ವಕೀಲ ನಾಗೇಶ್​ ಸುದೀರ್ಘ ವಾದ ಆಲಿಸಿದ ಹೈಕೋರ್ಟ್​ ಜಾಮೀನು ಅರ್ಜಿ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಇಂದು ಮಧ್ಯಾಹ್ನ 12:30ಕ್ಕೆ ಮತ್ತೆ ವಿಚಾರಣೆ ನಡೆಯಲಿದ್ದು ದಾಸನ ಜಾಮೀನಿನ ಭವಿಷ್ಯ ನಿರ್ಧಾರವಾಗಲಿದೆ.