ತುಮಕೂರು: ಊಟ ಕೊಟ್ಟಿಲ್ಲ ಎಂದು ಮಾಲೀಕನಿಗೆ ಡಾಬಾದಲ್ಲಿ ಕುಡುಕರ ಗ್ಯಾಂಗ್ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಕುಣಿಗಲ್ ತಾಲ್ಲೂಕಿನಲ್ಲಿರುವ ಭಕ್ತರಹಳ್ಳಿಯಲ್ಲಿ ನಡೆದಿದೆ.

ರಾಜ್ಯ ಹೆದ್ದಾರಿ 33ರ ಭಕ್ತರಹಳ್ಳಿ ಬಳಿಯಿರುವ ಹೈವೇ ಟೂರಿಸ್ಟ್ ಡಾಬಾದಲ್ಲಿ ಈ ಘಟನೆ ನಡೆದಿದ್ದು, ಬುಧವಾರ ತಡರಾತ್ರಿ 12 ಗಂಟೆಯ ವೇಳೆ 8 ಜನ ಪುಂಡರ ಗ್ಯಾಂಗ್ ಕಂಠ ಪೂರ್ತಿ ಕುಡಿದು ಡಾಬಾಗೆ ಬಂದಿದ್ದರು. ಈ ವೇಳೆ ಸರಿಯಾಗಿ ಊಟ ಕೊಟ್ಟಿಲ್ಲ ಎಂದು ಅಡುಗೆ ಭಟ್ಟ ಶರತ್‌ಗೆ ಚಾಕುವಿನಿಂದ ಇರಿದಿದ್ದಾರೆ. ಮಾಲೀಕನಿಗೆ ಮನಬಂದಂತೆ ಥಳಿಸಿ ಪುಂಡಾಟ ನಡೆಸಿದ್ದಾರೆ.

ಘಟನೆ ಸಂಬಂಧ ಪಟ್ಟಂತೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿ ಪುಂಡಾಟ ಮೆರೆದಿದ್ದ ನಾಲ್ವರು ಕುಡುಕರನ್ನು ಅರೆಸ್ಟ್ ಮಾಡಲಾಗಿದೆ. ಇನ್ನುಳಿದ ಆರೋಪಿಗಳಿಗೆ ಹುಡುಕಾಟ ಮುಂದುವರಿದಿದೆ. ಗಾಯಾಳು ಶರತ್ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.