ಮಂಡ್ಯ: ಹಿಂದೂ ಯುವಕನ ಮೇಲೆ ಅನ್ಯ ಕೋಮಿನ ಪುಂಡರು ಹಲ್ಲೆ ನಡೆಸಿದ ಪ್ರಕರಣ ಮಂಡ್ಯ ಜಿಲ್ಲೆಯ ಬೆಳ್ಳೂರು ಪಟ್ಟಣದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸ್ವೀಕರಿಸಲು ನಿರಾಕರಿಸಿದ್ದ ಪಿಎಸ್ಐ ಅನ್ನು ಅಮಾನತು ಮಾಡಲಾಗಿದೆ.
ಕರ್ತವ್ಯ ಲೋಪ ಕಾರಣ ನೀಡಿ ಬೆಳ್ಳೂರು ಠಾಣೆ ಪಿಎಸ್ಐ ಬಸವರಾಜ ಚಿಂಚೋಳಿ ಅವರನ್ನು ಅಮಾನತು ಮಾಡಿ ಮಂಡ್ಯ ಎಸ್ಪಿ ಎನ್. ಯತೀಶ್ ಆದೇಶ ಹೊರಡಿಸಿದ್ದಾರೆ.
ಬೆಳ್ಳೂರು ಗ್ರಾಮಸ್ಥರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟಿಸಿದ್ದರು. ಕಡೆಗೆ ಪ್ರಕರಣದ ಗಂಭೀರತೆ ಅರಿತು ಪೊಲೀಸರು ದೂರು ಪಡೆದಿದ್ದರು. ಘಟನೆ ಸಂಬಂಧ 3 ಪ್ರತ್ಯೇಕ ದೂರು ದಾಖಲಾಗಿತ್ತು.
ಈ ಹಿಂದೆ ದೂರು ಸ್ವೀಕರಿಸದ ಪಿಎಸ್ಐ ವಿರುದ್ಧವೂ ಕಂಪ್ಲೆಂಟ್ ದಾಖಲಾಗಿದೆ. ದೂರಿನ ಬೆನ್ನಲ್ಲೇ ಪಿಎಸ್ಐ ಅಮಾನತು ಮಾಡಿ ಎಸ್ಪಿ ಯತೀಶ್ ಆದೇಶ ನೀಡಿದ್ದಾರೆ.
ಹಲ್ಲೆ ಪ್ರಕರಣ ಸಂಬಂಧ 11ಕ್ಕೂ ಹೆಚ್ಚು ಆರೋಪಿಗಳ ಮೇಲೆ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಅಭಿಲಾಷ್ ತಂದೆ ರಾಮು ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದೆ.
ನವೀದ್, ಸೂಫಿಯಾನ್, ಇಮ್ರಾನ್, ಸಮೀರ್, ಮುದಾಸೀರ್ ಸೇರಿ 11ಕ್ಕೂ ಹೆಚ್ಚು ಮಂದಿ ಮೇಲೆ ಎಫ್.ಐ.ಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 341, 307, 504, 506 ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

