ಬೀದರ್: ಯುವಕನೋರ್ವನು ತಾನು ಪ್ರೀತಿಸಿದ ಯುವತಿಯ ಅಣ್ಣಂದಿರಿಂದಲೇ ಭೀಕರವಾಗಿ ಹತ್ಯೆಯಾಗಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಿರಗುಡಿ ಗ್ರಾಮದಲ್ಲಿ ನಡೆದಿದೆ.

25 ವರ್ಷದ ಪ್ರಶಾಂತ್ ಬಿರಾದಾರ್ ಎಂಬ ಯುವಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವತಿಯ ಸಹೋದರರು ಬರ್ಬರವಾಗಿ ಹತ್ಯೆಗೈದಿರುವ ಆರೋಪ ಕೇಳಿಬಂದಿದೆ. ಈ ವಿಷಯಕ್ಕೆ ಶುಕ್ರವಾರ ರಾತ್ರಿ 9 ಗಂಟೆಗೆ ಯುವತಿಯ ಸಹೋದರರಾದ ಯಲ್ಲಾಲಿಂಗ ಮೇತ್ರೆ, ಪ್ರಶಾಂತ್ ಮೇತ್ರೆ, ಮತ್ತು ಯುವಕ ಪ್ರಶಾಂತ್ ಬಿರಾದಾರ ಜೊತೆ ಗಲಾಟೆ ನಡೆದಿದೆ.

ನಮ್ಮ ತಂಗಿಯನ್ನೇ ಪ್ರೀತಿ ಮಾಡುತ್ತೀಯ ಎಂದು ಥಳಿಸಿದ್ದಾರೆ. ಪ್ರೀತಿಸಿದ ಯುವತಿಯನ್ನ ಬಿಡಲು ಯುವಕ ನಿರಾಕರಿಸಿದ್ದಾನಂತೆ. ಇದರಿಂದ ಯುವಕನನ್ನು ಅದೇ ಗ್ರಾಮದ ಯಲ್ಲಾಲಿಂಗ ಮೇತ್ರೆ ಹಾಗೂ ಪ್ರಶಾಂತ್ ಮೇತ್ರೆ ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಸದ್ಯ ಈ ಇಬ್ಬರು ಆರೋಪಿಗಳನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಇದೇ ಗ್ರಾಮದ ಪ್ರಶಾಂತ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು ಒಂದೇ ಗ್ರಾಮದವರು ಆಗಿದ್ದರಿಂದ ಇಬ್ಬರ ಮಧ್ಯೆ ಕಳೆದ ಕೆಲ ವರ್ಷಗಳಿಂದ ಪ್ರೀತಿ ಬೆಳೆದಿತ್ತು ಇಂಜಿನೀಯರಿಂಗ್ ಪದವಿ ಪಡೆದಿದ್ದ ಯುವತಿ, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಅತ್ತ ಐಟಿಐ ಮುಗಿಸಿರುವ ಮೃತ ಪ್ರಶಾಂತ್, ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ಹಣ್ಣಿನ ವ್ಯಾಪಾರ ಮಾಡಿಕೊಂಡಿದ್ದ.

ಸಹೋದರಿ ಮದುವೆಗಾಗಿ  ಪ್ರಶಾಂತ್ ಊರಿಗೆ ಬಂದಿದ್ದನು. ಇನ್ನು ಪ್ರಶಾಂತ್ ಹಾಗೂ ಯುವತಿ ಪ್ರೀತಿಗೆ ಯುವತಿಯ ಕುಟುಂಬಸ್ಥರು ವಿರೋಧಿಸಿದ್ದರು ಯುವತಿಯನ್ನು ಫಾಲೋ ಮಾಡ್ಬೇಡ, ಮಾತನಾಡಿಸ್ಬೇಡ ಅಂತ ಈಗಾಗಲೇ ವಾರ್ನಿಂಗ್ ಮಾಡಿದ್ರಂತೆ. ಆದರೂ ಇಬ್ಬರ ನಡುವೆ ಪ್ರೀತಿ, ಪ್ರೇಮ ಮುಂದುವರೆದಿತ್ತು. ಇದೇ ಮಾರ್ಚ್ 26ರಂದು ಪ್ರಶಾಂತ್‌ನ ಸಹೋದರಿ ಮದುವೆಗೆ ಬಂದಿದ್ದ ಈ ಹಿನ್ನೆಲೆಯಲ್ಲಿ ಮಾರ್ಚ್ 20ರಂದು ಪುಣೆಯಿಂದ ನಿರಗುಡಿ ಗ್ರಾಮಕ್ಕೆ ಪ್ರಶಾಂತ್ ಬಂದಿದ್ದ ಎನ್ನಲಾಗಿದೆ ಈ ಬೆನ್ನಲ್ಲೇ ಪ್ರೇಯಸಿಯೂ ಕೂಡಾ ಗ್ರಾಮಕ್ಕೆ ಆಗಮಿಸಿದ್ದಳಂತೆ.

ಇನ್ನು ಘಟನಾ ಸ್ಥಳಕ್ಕೆ ಬಸವಕಲ್ಯಾಣ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಇತ್ತ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.

ವರದಿ:ಯೋಹಾನ್ ಪಿ ಹೊನ್ನಡ್ಡಿ ಬೀದರ್