ಮೈಸೂರು: ಮಾವಿನಕಾಯಿ ಕೊಯ್ಯುವ ವಿಚಾರದಲ್ಲಿ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಶಂಕಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಲ್ಲೇಶ್ ಮೃತ ದುರ್ದೈವಿ. ಕೊಲೆ ಆರೋಪಿ ಚೇತನ್ ಇದೀಗ ಪೊಲೀಸರ ವಶದಲ್ಲಿದ್ದಾನೆ. ಶಂಕಹಳ್ಳಿಯಲ್ಲಿರುವ ಜಮೀನಿನಲ್ಲಿ ಮಲ್ಲೇಶ್ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಜಮೀನು ವಿಚಾರದಲ್ಲಿ ವಿವಾದ ಶುರುವಾಗಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವೇಳೆ ಮಲ್ಲೇಶ್ ಜಮೀನಿನಲ್ಲಿದ್ದ ಮಾವಿನ ಮರದಿಂದ ಕಾಯಿಗಳನ್ನ ಕೀಳಿಸುವಾಗ ಚೇತನ್ ಕಿರೀಕ್ ತೆಗೆದಿದ್ದಾನೆ.

ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಚೇತನ್ ಜೊತೆ ಸರಿತಾ, ಪ್ರವೀಣ, ಪವನ್, ಮಂಜುಳ, ಕರಿಗೌಡ ಸಹ ಸೇರಿ ಗಲಾಟೆ ಮಾಡಿದ್ದಾರೆ. ಈ ವೇಳೆ ಚೇತನ್ ತನ್ನ ಬಳಿ ಇದ್ದ ಚಾಕುವಿನಿಂದ ಮಲ್ಲೇಶ್ ಗೆ ಇರಿದು ಪರಾರಿಯಾಗಿದ್ದಾನೆ.

ರಕ್ತಸ್ರಾವದಿಂದ ನರಳುತ್ತಿದ್ದ ಮಲ್ಲೇಶ್ ರನ್ನ ಆಸ್ಪತ್ರೆಗೆ ಸಾಗಿಸಿದ್ದು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಮೃತ ಮಲ್ಲೇಶ್ ಪತ್ನಿ ನಾಗಮ್ಮ ಚೇತನ್ ಸೇರಿದಂತೆ 6 ಮಂದಿ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.