ಮಂಗಳೂರು: ಕೊಂಕಣಿ ಲೇಖಕ್ ಸಂಘ್ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿ ಆರಂಭಗೊಂಡಿತು. 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ್ ಸಂಘ್ ನಿರ್ಧರಿಸಿತು.
ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. 2026ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಲೇಖಕ ಶ್ರೀ ಪೆಟ್ರಿಕ್ ಕಾಮಿಲ್ ಮೊರಾಸ್ (ಎಮ್. ಪೆಟ್ರಿಕ್) ಇವರನ್ನು ಆಯ್ಕೆ ಮಾಡಲಾಗಿದೆ.

ನವೆಂಬರ್ 17, 1945 ರಂದು ಜನಿಸಿದ ಪೆಟ್ರಿಕ್ ಕಾಮಿಲ್ ಮೊರಾಸ್, ಕೊಂಕಣಿ ಸಾಹಿತ್ಯ ಲೋಕದಲ್ಲಿ ಎಮ್. ಪೆಟ್ರಿಕ್ ಎಂದೇ ಖ್ಯಾತರು. ಬಾಲ್ಯದ ಕಷ್ಟಗಳ ನಡುವೆಯೂ ಅವರು ಕೊಂಕಣಿ ಸಾಹಿತ್ಯದ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದರು. ಕುಟುಂಬದ ಆಸರೆಯಾಗಲು ಐದನೇ ತರಗತಿಯಲ್ಲೇ ಶಿಕ್ಷಣವನ್ನು ಮೊಟಕುಗೊಳಿಸಿದ ಇವರಿಗೆ ಜೆ. ಬಿ. ರಸ್ಕೀನ್ಹಾ ಅವರು ಮಾರ್ಗದರ್ಶಕರಾಗಿ ಲಭಿಸಿದರು. ರಸ್ಕೀನ್ಹಾ ಅವರು ಇವರಿಗೆ ಪುಸ್ತಕಗಳನ್ನು ನೀಡುವುದಲ್ಲದೆ, ಮನೆಮನೆಗೆ ಹೋಗಿ ಸಾಹಿತ್ಯದ ಪುಸ್ತಕಗಳನ್ನು ಮಾರಾಟ ಮಾಡಲು ಪ್ರೋತ್ಸಾಹಿಸಿದರು.
ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಪುಸ್ತಕ ಮಾರಾಟಗಾರರಾಗಿ ಮತ್ತು ‘ಕಾಣಿಕ್’ ಪತ್ರಿಕೆಯ ಸಹ-ಸಂಪಾದಕರಾಗಿ ವೃತ್ತಿಜೀವನ ಆರಂಭಿಸಿದ ಇವರು, ಮುಂದೆ 800ಕ್ಕೂ ಹೆಚ್ಚು ಸಣ್ಣ ಕಥೆಗಳು, 400ಕ್ಕೂ ಹೆಚ್ಚು ಲೇಖನಗಳು ಹಾಗೂ ಹತ್ತು ಕಾದಂಬರಿಗಳನ್ನು ರಚಿಸಿದ ಬಹುಮುಖ ಸಾಹಿತಿಯಾದರು. ತಮ್ಮದೇ ಆದ ‘ನಿತ್ಯಾದರ್ ಪ್ರಕಾಶನ’ದ ಮೂಲಕ ನಾಟಕಗಳು ಮತ್ತು ಪತ್ತೇದಾರಿ ಕಥೆಗಳು ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿ, ಕೊಂಕಣಿ ಭಾಷೆಯ ಸೇವಕರಾಗಿ ಸೇವೆ ಸಲ್ಲಿಸಿದರು.

ಇವರ ಅಪಾರ ಸಾಹಿತ್ಯ ಸೇವೆಯನ್ನು ಪರಿಗಣಿಸಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಎಂ. ಪ್ಯಾಟ್ರಿಕ್ ಅವರಿಗೆ ‘ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ – 2026’ ಲಭಿಸಿವೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಫೆಬ್ರವರಿ 07, 2026ನೇ ಶನಿವಾರ ಸಂಜೆ 6.30ಕ್ಕೆ, ಸಂದೇಶ ಪ್ರತಿಷ್ಠಾನ, ಬಜ್ಜೋಡಿ, ಮಂಗಳೂರು ಇಲ್ಲಿ ಜರಗಲಿರುವುದು.
ಪತ್ರಿಕಾಗೋಷ್ಠಿಯಲ್ಲಿ ಡೊಲ್ಫಿ ಎಫ್. ಲೋಬೊ – ಸಮಿತಿ ಸದಸ್ಯರು, ಡಾ| ಜೆರಿ ನಿಡ್ಡೋಡಿ – ಸಲಹಾ ಸಮಿತಿ ಸದಸ್ಯರು, ಜೆ. ಎಫ್. ಡಿಸೋಜಾ – ಸಲಹಾ ಸಮಿತಿ ಸದಸ್ಯರು ಹಾಜರಿದ್ದ ಸದಸ್ಯರು, ರಿಚರ್ಡ್ ಮೊರಾಸ್ – ಸಂಚಾಲಕರು ಉಪಸ್ಥಿತರಿದ್ದರು.

