ಪ್ರಸಿದ್ಧ ಕಲಾವಿದ ಹಾಗೂ ಹಿರಿಯ ಕಲಾಶಿಕ್ಷಕ ಸಯ್ಯದ್ ಆಸಿಫ್ ಅಲಿ (54) ಅವರು ಸೋಮವಾರ, ಜನವರಿ 5, 2026ರ ಮಧ್ಯಾಹ್ನ ನಗರದ ಅಳಕೆಯಲ್ಲಿರುವ ಮಹಾಲಸಾ ದೃಶ್ಯಕಲಾ ಕಾಲೇಜಿನಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಹಠಾತ್ ಹೃದಯಾಘಾತದಿಂದ ನಿಧನರಾದರು. ಅವರು ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಗ್ರಾಮದಲ್ಲಿ ಫೆಬ್ರವರಿ 8, 1972 ರಂದು ಜನಿಸಿದ ಅವರು, 1995 ರಲ್ಲಿ ತುಮಕೂರಿನ ರವೀಂದ್ರ ಕಲಾನಿಕೇತನದಿಂದ ಲಲಿತಕಲೆಯಲ್ಲಿ ಸಾಮಾನ್ಯ ಡಿಪ್ಲೊಮಾ ಮತ್ತು 2008 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ವಿಷುಯಲ್ ಆರ್ಟ್ (ಎಂವಿಎ) ಪದವಿ ಪಡೆದಿದ್ದರು. 1996 ರಲ್ಲಿ ಮಹಾಲಸಾ ದೃಶ್ಯಕಲಾ ಕಾಲೇಜಿಗೆ ಸೇರಿದರು ಮತ್ತು ನಿಧನ ಸಮಯದಲ್ಲಿ ಅಪ್ಲೈಡ್ ಆರ್ಟ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು.

ಸಯ್ಯದ್ ಆಸಿಫ್ ಅಲಿ ಅವರು ನಿಪುಣ ಕಲಾವಿದರಾಗಿದ್ದು, ಸ್ಥಳದಲ್ಲೇ ರಚಿಸಿದ ವಿಶಿಷ್ಟ ಹಾಗೂ ಸಮೃದ್ಧ ಭೂದೃಶ್ಯ ಜಲವರ್ಣ ಚಿತ್ರಗಳಿಗೆ ಪ್ರಸಿದ್ಧರಾಗಿದ್ದರು. ವಿದ್ಯಾರ್ಥಿಗಳಿಗೆ ವೈಯಕ್ತಿಕ ಮಾರ್ಗದರ್ಶನ ನೀಡುವ ಸ್ಪೂರ್ತಿದಾಯಕ ಶಿಕ್ಷಕರಾಗಿಯೂ ಗುರುತಿಸಿಕೊಂಡಿದ್ದರು. ಮೂರು ದಶಕಗಳ ತಮ್ಮ ವೃತ್ತಿಜೀವನದಲ್ಲಿ ಅವರು ಅನೇಕ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.

ಮೈಸೂರು ದಸರಾ ಕಲಾ ಪ್ರದರ್ಶನದಲ್ಲಿ ಹತ್ತು ಬಾರಿ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರದರ್ಶನಗಳಲ್ಲಿ ಐದು ಬಾರಿ ಪಾಲ್ಗೊಂಡಿದ್ದರು. ಅಲ್ಲದೆ ಹಲವು ಕಲಾ ಶಿಬಿರಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಕರ್ನಾಟಕ ಲಲಿತಕಲಾ ಅಕಾಡೆಮಿ ರಾಜ್ಯ ಪ್ರಶಸ್ತಿ, ಕ್ಯಾಮ್ಲಿನ್ ರಾಷ್ಟ್ರೀಯ ಪ್ರಶಸ್ತಿ ಹಾಗೂ ಒಂಬತ್ತು ಮೈಸೂರು ದಸರಾ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರತಿಷ್ಠಿತ ಗೌರವಗಳನ್ನು ಪಡೆದಿದ್ದರು.

ಅವರ ಪಾರ್ಥಿವ ಶರೀರವನ್ನು ಸೋಮವಾರ ಸಂಜೆ ಮಹಾಲಸಾ ದೃಶ್ಯಕಲಾ ಕಾಲೇಜು ಮತ್ತು ಕೊಡಿಯಾಲಗುತ್ತು ಕಲಾ ಕೇಂದ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಬಳಿಕ ಸ್ವಗ್ರಾಮ ಮೊಳಕಾಲ್ಮೂರಿಗೆ ಅಂತ್ಯಸಂಸ್ಕಾರಕ್ಕಾಗಿ ಕೊಂಡೊಯ್ಯಲಾಯಿತು. ಹಿರಿಯ ಕಲಾವಿದರ ನಿಧನಕ್ಕೆ ಮಂಗಳೂರು ಇಂಟಾಕ್ ಘಟಕ ಹಾಗೂ ಆರ್ಟ್ ಕೆನರಾ ಟ್ರಸ್ಟ್ ಸಂತಾಪ ವ್ಯಕ್ತಪಡಿಸಿದೆ.