ಚಿತ್ರದುರ್ಗ: ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಕಟೌಟ್ ಮುಂದೆ ಮೂವರು ಯುವಕರು ಮೇಕೆ ಬಲಿ ನೀಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಮರಿಯಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೇಕೆ ಬಲಿ ನೀಡಿದ ಆರೋಪದ ಮೇಲೆ ಆರ್‌ಸಿಬಿ ಅಭಿಮಾನಿಗಳಾದ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ಸಣ್ಣಪಾಲಯ್ಯ, ಜಯಣ್ಣ, ತಿಪ್ಪೇಸ್ವಾಮಿ ವಿರುದ್ಧ ಪ್ರಾಣಿಬಲಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಮೇ 3ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ ಆರ್‌ಸಿಬಿ ತಂಡ ಸಿಎಸ್‌ಕೆ ತಂಡವನ್ನು ಸೋಲಿಸಿದ್ದಕ್ಕೆ ಸಂಭ್ರಮ ವ್ಯಕ್ತಪಡಿಸಿ ಗ್ರಾಮದ ಯುವಕರು ವಿರಾಟ್‌ ಕೊಹ್ಲಿ ಭಾವಚಿತ್ರಗಳ ಕಟೌಟ್‌ ಅಳವಡಿಸಿದ್ದರು. ಬಳಿಕ ಮೇಕೆಯೊಂದನ್ನು ಕಟೌಟ್‌ ಮುಂದೆ ಕತ್ತರಿಸಿ, ಕೊಹ್ಲಿ ಭಾವಚಿತ್ರಕ್ಕೆ ರಕ್ತಾಭಿಷೇಕ ಮಾಡಿದ್ದರು ಎಂದು ಆರೋಪಿಸಲಾಗಿದೆ.